LOCAL NEWS : ಮಂಡಲಗಿರಿ ಗ್ರಾಮಸ್ಥರಿಂದ ಗವಿಮಠದ ಮಹಾ ದಾಸೋಹಕ್ಕೆ 10 ಕ್ವಿಂಟಲ್ ಬೇಸನ್ ಸಿಹಿ ತಯಾರಿ!

ಪ್ರಜಾ ವೀಕ್ಷಣೆ ಸುದ್ದಿ :
ಕುಕನೂರು : ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ ಗೊಂಡಿರುವ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ 15 ದಿನಗಳ ಕಾಲ ಜರುಗುವ ಮಹಾ ದಾಸೋಹಕ್ಕೆ ಮಂಡಲಗಿರಿ ಗ್ರಾಮಸ್ಥರಿಂದ 10 ಕ್ವಿಂಟಲ್ ಬೇಸನ್ ತಯಾರಿ ಕಾರ್ಯ ಮಂಗಳವಾರ ಜರುಗಿತು.
ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ಮಂಗಳವಾರ ಹಬ್ಬದ ಸಂಭ್ರಮ ಮನೆ ಮಾಡಿದ್ದು ಕಾರಣ ಮಹಿಳೆಯರೆಲ್ಲ ಸೇರಿಕೊಂಡು ಗವಿಸಿದ್ದಪ್ಪಜ್ಜನ ಜಾತ್ರೆಗೆ ವಿಶೇಷವಾಗಿ 10 ಕ್ವಿಂಟಲ್ ಬೇಸನ್ ತಯಾರಿ ಕಾರ್ಯವನ್ನು ತಮ್ಮ ಮನೆಯ ಹಬ್ಬದ ಕಾರ್ಯಕ್ರಮದಂತೆ ಸಂಭ್ರಮ ಸಡಗರದಿಂದ ಪಾಲ್ಗೊಂಡು ಸಿಹಿ ಬೇಸನ್ ತಯಾರಿಸಿದರು.
10 ಕ್ವಿಂಟಲ್ ಬೇಸನ್ ತಯಾರಿಗೆ 5 ಕ್ವಿಂಟಾಲ್ ಸಕ್ಕರೆ, ಮೂರು ಕ್ವಿಂಟಲ್ ಪುಟಾಣಿ ಹಿಟ್ಟು, 10 ಕೆಜಿ ಡಾಲ್ಡಾ, 5 ಕೆ.ಜಿ ತುಪ್ಪ, 5 ಕೆಜಿ ಗೋಡಂಬಿ, ಎಂಟು ಕೆಜಿ ದ್ರಾಕ್ಷಿ ಹಾಗೂ 250 ಗ್ರಾಂ ಯಾಲಕ್ಕಿ ಬಳಕೆ ಮಾಡಿರುವುದಾಗಿ ಬೇಸನ್ ತಯಾರಿಯ ಬಾಣಸಿಗರು ಪತ್ರಿಕೆಗೆ ತಿಳಿಸಿದ್ದಾರೆ. ಈ ಸಿಹಿಕಾದ್ಯದೊಂದಿಗೆ ಸುಮಾರು 5,000 ರೊಟ್ಟಿಯನ್ನು ಶುಕ್ರವಾರ ಶ್ರೀಮಠಕ್ಕೆ ಸಮರ್ಪಣೆ ಮಾಡಿ ಸೇವೆ ಮಾಡಿ ಬರುವುದಾಗಿ ಗ್ರಾಮಸ್ಥರು ತಿಳಿಸಿರುತ್ತಾರೆ.