KOPPAL NEWS :ಕೆಂಚನಡೊಣಿ ತಾಂಡಾದ ಸೀತ್ಲ ಹಬ್ಬದ ಅಂಗವಾಗಿ ವಿಬಿಜಿರಾಮ್ಜೀ ಯೋಜನೆ ಕುರಿತು ವಿಶೇಷ ಜಾಗೃತಿ
PV NEWS ಕನ್ನಡ 24×7:
ಕೊಪ್ಪಳ, ಜು. 21(PV NEWS): ಬಂಜಾರ ಸಮುದಾಯದ ಸೀತ್ಲ ಹಬ್ಬದ ಅಂಗವಾಗಿ ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಡೊಣಿ ತಾಂಡಾದಲ್ಲಿ ವಿಕಸಿತ ಭಾರತ ಉದ್ಯೋಗ ಖಾತ್ರಿ ಹಾಗೂ ಜೀವನೋಪಾಯ ಅಭಿಯಾನ (ಗ್ರಾಮೀಣ) – ವಿಬಿಜಿರಾಮ್ಜೀ ಯೋಜನೆಯ ವಿಶೇಷ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಜಾಗೃತಿ ಕಾರ್ಯಕ್ರಮ ನಡೆಯಿತು.
ತಾಲೂಕು ಪಂಚಾಯಿತಿಯ ವಿಬಿಜಿರಾಮ್ಜೀ ಯೋಜನೆಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿಕಾರರು ಗುಳೆ ಹೋಗುವುದನ್ನು ತಡೆದು, ಒಂದು ಕುಟುಂಬಕ್ಕೆ ಸ್ಥಳೀಯ ಮಟ್ಟದಲ್ಲೇ 125 ದಿನಗಳ ಉದ್ಯೋಗ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಸಾಮುದಾಯಿಕ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಅವಕಾಶವಿದ್ದು, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಹಾಗೂ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಯೋಜನೆಯ ಎಲ್ಲ ಹಂತಗಳಲ್ಲೂ ಆನ್ಲೈನ್ ಹಾಗೂ ಪಾರದರ್ಶಕ ವ್ಯವಸ್ಥೆ ಅಳವಡಿಸಲಾಗಿದ್ದು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯ ಮೂಲಕ ವಿಕಸಿತ ಭಾರತದ ಗುರಿ ಸಾಧಿಸಲು ಯೋಜನೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಪ್ರತಿ ಮಾನವ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಅಳತೆಗೆ ಅನುಗುಣವಾಗಿ ಕೂಲಿ ಪಾವತಿಸಲಾಗುತ್ತದೆ. ತಾಂಡಾದ ನಿವಾಸಿಗಳು ಗುಳೆ ಹೋಗದೆ ಯೋಜನೆಯಡಿ ಅನುಮೋದಿತ 318 ಕಾಮಗಾರಿಗಳಲ್ಲಿ ಭಾಗವಹಿಸಿ 125 ದಿನಗಳ ಉದ್ಯೋಗದ ಸೌಲಭ್ಯ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಗ್ರಾಮ ಪಂಚಾಯಿತಿಯ ಮೂಲಕ ಕೈಗೆತ್ತಿಕೊಳ್ಳುವ ಕಾಮಗಾರಿಗಳಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದ ಅವರು, ಹೊಸದಾಗಿ ನೋಂದಣಿಯಾದ ಕುಟುಂಬಗಳಿಗೆ ಉದ್ಯೋಗ ಖಾತರಿ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಗಂಗಪ್ಪ ನಾಯಕ, ತಾಂಡಾದ ಪ್ರಮುಖ ಅಮರೇಶ ಜಿನ್ನಾಪುರ, ಶಾಲೆಯ ಮುಖ್ಯೋಪಾಧ್ಯಾಯ ಫಕೀರಪ್ಪ, ಗ್ರಾಮ ಪಂಚಾಯಿತಿ ಡಿಇಒ ಲಕ್ಷ್ಮಣ ಹಿರೇಮನಿ, ಸಿಬ್ಬಂದಿ ಮಲ್ಲಪ್ಪ, ಗ್ರಾಮ ಕಾಯಕ ಮಿತ್ರ ಯಂಕಮ್ಮ ವಾಲಿಕಾರ, ತಾಂಡಾ ರೋಜಗಾರ್ ಮಿತ್ರ ಶೇಖಪ್ಪ ಪೂಜಾರಿ ಹಾಗೂ ತಾಂಡಾದ ನಿವಾಸಿಗಳು ಭಾಗವಹಿಸಿದ್ದರು.