KOPPAL NEWS : “ಕಳಪೆ ರಸ್ತೆ ಕಾಮಗಾರಿ: ತಗ್ಗು ಬಿದ್ದು ನೀರು ಜಮಾವಣೆ, ಅಪಘಾತ ಭೀತಿ! ದುರಸ್ಥಿಗೆ ಆಗ್ರಹ..!!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಫೆ. 25 : ತಾಲೂಕಿನ ಬೂದುಗುಂಪಾ ಪಂಚಾಯತಿ ವ್ಯಾಪ್ತಿಯ ನಾಗೇಶನಹಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆಯ ಕಳಪೆ ಕಾಮಗಾರಿಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡದ ಪರಿಣಾಮ ಕೆಲವೆಡೆ ಕಬ್ಬಿಣದ ರಾಡ್ಗಳು ಹೊರಗೆ ಕಾಣಿಸಿಕೊಂಡಿದ್ದು, ಅಪಘಾತದ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮಗಾರಿ ಬಳಿಕವೂ ದೋಷಗಳನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮಸ್ಥರು ಬಳಸಿದ ನೀರು ರಸ್ತೆ ತಗ್ಗು ಭಾಗದಲ್ಲಿ ಸೇರಿ ಜಮಾವಣೆಗೊಂಡಿದ್ದು, ದುರ್ವಾಸನೆ ಹಾಗೂ ಅಸ್ವಚ್ಛತೆ ಹೆಚ್ಚಾಗಿದೆ. ಇದರಿಂದ ರೋಗ ಹರಡುವ ಭೀತಿ, ಸೊಳ್ಳೆ ಕಾಟ ಹೆಚ್ಚಳ ಹಾಗೂ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡೇ ಅಪಘಾತದ ಆತಂಕದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿ ಮತ್ತು ನೀರು ನಿಲುವು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಯುವ ಹೋರಾಟಗಾರ ಕಾಶಿಂ ಕೆ. ಎನ್ ನಾಗೇಶನಹಳ್ಳಿ ಅವರು ಆಗ್ರಹಿಸಿದ್ದಾರೆ.