LOCAL NEWS : ಮಲಕಸಮುದ್ರದಲ್ಲಿ ತೆಪ್ಪ ಮುಳುಗಿ ಮೀನುಗಾರರ ದುರಂತ : ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಯರೆಡ್ಡಿ..!
ಯಲಬುರ್ಗಾ: ಮೀನು ಹಿಡಿಯಲು ತೆರಳಿದ್ದ ನಾಲ್ಕು ಯುವಕರಲ್ಲಿ ಇಬ್ಬರು ತೆಪ್ಪ ಮಗುಚಿ ನೀರುಪಾಲಾದ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಇಂದು ಶಾಸಕ ಬಸವರಾಜ ರಾಯರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೀರುಪಾಲಾದವರು ಫಕೀರಸಾಬ ಮುಜಾವರ (36, ವಜ್ರಬಂಡಿ) ಮತ್ತು ಶರಣಪ್ಪ ಎಮ್ಮೆ (32, ಗುತ್ತೂರು) ಎಂದು ತಿಳಿದು ಬಂದಿದೆ.ಜತೆಗೆ ಹೋದ ಶರಣಪ್ಪ ಹಣಗಿ ಮತ್ತು ಹನುಮೇಶ ಗೊಂಡಬಾಳ ಈಜಿಕೊಂಡು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶೋಧ ಕಾರ್ಯ:
ಘಟನೆಯ ಬಗ್ಗೆ ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ, ಸಿಪಿಐ ಮೌನೇಶ ಮಾಲಿಪಾಟೀಲ್, ಪಿಎಸ್ಐ ವಿಜಯ ಪ್ರತಾಪ, ಹಾಗೂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಯಪ್ಪ ಭಜಂತ್ರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಶೋಧ ಕಾರ್ಯ ನಡೆಸಲಾಯಿತು. ಈವರೆಗೆ ಮೃತದೇಹಗಳು ಪತ್ತೆಯಾಗಿಲ್ಲ, ಶೋಧ ಕಾರ್ಯ ಮುಂದುವರಿಯುತ್ತಿದೆ.
ಪರಿಹಾರಕ್ಕೆ ಒತ್ತಾಯ:
ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ಗ್ರಾಮಸ್ಥರು ಮತ್ತು ಸ್ಥಳೀಯ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ.