LOCAL NEWS : ಡಿ. 3ರಿಂದ “ಅಣಿಕಿ ನೋಡ್ಯಾಳ ಹಳ್ಳಕ್ಕೆ ಕೆಡಿವ್ಯಾಳ” ನಾಟಕ ಅಮೋಘ ಆರಂಭ..!!

ಕುಕನೂರು : ಶ್ರೀ ಗುದ್ನೇಶ್ವರ ಜಾತ್ರೆಯ ಅಂಗವಾಗಿ ನಾಳೆಯಿಂದ “ಅಣಿಕಿ ನೋಡ್ಯಾಳ ಹಳ್ಳಕ್ಕೆ ಕೆಡಿವ್ಯಾಳ” ಎಂಬ ಫುಲ್ ಕಾಮಿಡಿ ನಾಟಕ ಪ್ರದರ್ಶನ ಕಾಣಲಿದೆ ಎಂದು ನಾಟಕ ಕಂಪನಿ ಮಾಲಕರು ಹಾಗೂ ಹಿರಿಯ ಕಲಾವಿದೆ ಪ್ರೇಮ ಗುಳೇದಗುಡ್ಡ ತಿಳಿಸಿದರು.
ಶ್ರೀ ಸಂಗಮೇಶ್ವರ ನಾಟ್ಯ ಸಂಘ ಆಶಾಪುರ ಇವರಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿದ್ದು, ಈ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಟಕ ಕಂಪನಿಯ ಮಾಲೀಕರಾದ ಹಿರಿಯ ಕಲಾವಿದೆ ಪ್ರೇಮ ಗುಳೇದಗುಡ್ಡ, ‘ಶ್ರೀ ಗುದ್ನೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮ ಕಂಪನಿಯಿಂದ ಫುಲ್ ಕಾಮಿಡಿಯುಳ್ಳ ಕುಟುಂಬ ಸಮೇತರಾಗಿ ನೋಡುವ ಉತ್ತಮ ಸಾಮಾಜಿಕ ಕಾಳಜಿ ಇರುವ “ಅಣಿಕಿ ನೋಡ್ಯಾಳ ಹಳ್ಳಕ್ಕೆ ಕೆಡಿವ್ಯಾಳ” ಎಂಬ ನಾಟಕವನ್ನು ಪ್ರದರ್ಶನ ಮಾಡಲಿದ್ದೇವೆ, ಯಾವುದೇ ಅಶ್ಲೀಲವಾಗಿ ಪದ ಬಳಕೆ ಮಾಡದೆ, ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತ ನಾಟಕ ಇದಾಗಿದೆ ಎಂದರು.

ಸರ್ಕಾರ ನೀಡುವಂತಹ ಗೌರವಧನ ಹಾಗೂ ಪ್ರೋತ್ಸಾಹ ಧನ ನಾಟಕ ಕಂಪನಿಯ ಕಲಾವಿದರ ದಿನನಿತ್ಯದ ಜೀವನದ ಅವಶ್ಯಕತೆಗಳಿಗೆ ಸಲುತ್ತಿಲ್ಲ, ಹಾಗಾಗಿ ವೃತ್ತಿ ರಂಗಭೂಮಿಯಲ್ಲಿರುವ ಕಲಾವಿದರ ಜೀವನ ನಡೆಸುವುದೇ ಬಹಳಷ್ಟು ಕಷ್ಟಕರವಾಗಿದೆ. ಸರ್ಕಾರಗಳು ಈ ಬಡ ಕಲಾವಿದರನ್ನ ಗುರುತಿಸಿ ಮತ್ತಷ್ಟು ಗೌರವಧನ ಹಾಗೂ ಬಡ ನಾಟಕ ಕಂಪನಿಗಳಿಗೆ ಪ್ರೋತ್ಸಾಹ ಧನವನ್ನ ಹೆಚ್ಚಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಪ್ರಸ್ತುತವಾಗಿ ಈ ನಾಟಕದಲ್ಲಿ ಕಾಂತಾರ ಭಾಗ ಒಂದರ ಕಲಾವಿದೆ, ಚಲನಚಿತ್ರ ನಟಿ ಗಂಗಾ ನಕ್ಷತ್ರ ಮಾತನಾಡಿ, ‘ ಸಿನಿಮಾ ಕಲಾವಿದರ ಮೂಲ ಕರ್ಮಭೂಮಿ ವೃತ್ತಿರಂಗಭೂಮಿಯಾಗಿದ್ದು, ಈ ವೃತ್ತಿ ರಂಗಭೂಮಿ ಇಂದಾನೆ ಸಾಕಷ್ಟು ಸಿನಿಮಾ ಕಲಾವಿದರು ಹೆಸರು ಹಣ ಆಸ್ತಿ ಹಾಗೂ ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ. ಆದರೆ ಪ್ರಸ್ತುತವಾಗಿ ವೃತ್ತಿ ರಂಗಭೂಮಿ ಬಹಳಷ್ಟು ಕಡೆಗಣನೆ ಆಗುತ್ತಿದ್ದು, ಬೇಸರದ ಸಂಗತಿ. ಈ ನಾಟಕದಲ್ಲಿ ನನ್ನದೊಂದು ಪಾತ್ರ ಬಹುಮುಖ್ಯವಾಗಿದೆ. ಪ್ರತಿ ದಿನ ಎರಡು ಆಟಗಳು, ಸಂಜೆ 6:15ಕ್ಕೆ ಹಾಗೂ ರಾತ್ರಿ 9:30ಕ್ಕೆ ಪ್ರದರ್ಶನ ಆಗಲಿದೆ ಎಂದರು.