BIG NEWS : ಭೀಕರ ರಸ್ತೆ ಅಪಘಾತ : 7 ವರ್ಷದ ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವು : ಮಗಳನ್ನು ಕಳೆದುಕೊಂಡು ತಂದೆ ಹುಲಗಪ್ಪ ಕಣ್ಣೀರು..!

ಪ್ರಜಾವೀಕ್ಷಣೆ ಸುದ್ದಿ :
ತುಮಕೂರು / ಕುಕನೂರು : ತುಮಕೂರು ಜಿಲ್ಲೆಯ ಕೋರಾ ಹತ್ತಿರ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, ಇವರಲ್ಲಿ ಒಬ್ಬ 7 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಈ ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಇದೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಕುಕನೂರು ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಸಾಕ್ಷಿ (ವಯಸ್ಸು 7), ವೆಂಕಟೇಶಪ್ಪ ( ವಯಸ್ಸು 30), ಮಾರತಪ್ಪ (ವಯಸ್ಸು 35) ಹಾಗೂ ಗವಿಸಿದ್ದಪ್ಪ (ವಯಸ್ಸು 40) ಇವರೇ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳು ಪ್ರಶಾಂತ್ (ವಯಸ್ಸು 32), ಪ್ರವೀಣ್ ಕುಮಾರ್ (ವಯಸ್ಸು 28), ರಾಜಪ್ಪ (ವಯಸ್ಸು 45), ಹುಲಗಪ್ಪ (ವಯಸ್ಸು 38 ), ರಾಕೇಶ್ ಬಳಿಗೇರಿ ( ವಯಸ್ಸು 24) ತಿರುಪತಿ ಕಟ್ಟಿಮನಿ ( ವಯಸ್ಸು38), ಶ್ರೀನಿವಾಸ್ (ವಯಸ್ಸು 32) ಎಂದು ತಿಳಿದು ಬಂದಿದೆ.
ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೂಸರ್ನಲ್ಲಿ ಒಟ್ಟು 12 ಮಂದಿ ಪ್ರಯಾಣ ಮಾಡುತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಗಳನ್ನು ಕಳೆದುಕೊಂಡು ತಂದೆ ಹುಲಗಪ್ಪ ಕಣ್ಣೀರು..!!
ಈ ಅಪಘಾತದಲ್ಲಿ ಮಗಳನ್ನು ಕಳೆದುಕೊಂಡು ಆಕೆಯ ತಂದೆ ಹುಲಗಪ್ಪ ಕಣ್ಣೀರು ಹಾಕುತ್ತಿದ್ದಾರೆ. “ಸಾಕ್ಷಿ ನನ್ನ ಮಗಳು. ಶಬರಿ ಮಲೆಗೆ 5 ರಂದು ತೆರಳಿದ್ದೆವು. ದೇವರ ದರ್ಶನ ಮಾಡಿಕೊಂಡು ವಾಪಾಸ್ ಆಗುತಿದ್ದೆವು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ನಾವು 11 ಜನ ಪ್ರಯಾಣ ಮಾಡುತಿದ್ದೆವು. 10 ಜನ ಅಕ್ಕಪಕ್ಕದ ಊರಿನ ನಾವು ಒಟ್ಟಿಗೆ ಮಾಲೆ ಹಾಕಿದ್ದೆವು. ಒಟ್ಟಾಗಿ ಶಬರಿ ಮಲೆಗೆ ತೆರಳಿದ್ದೆವು. ಕಾರು ಚಾಲಕ ಸೇರಿ 11 ಜನ ಪ್ರಯಾಣ ಮಾಡಿದ್ವೀ. ನನ್ನ ಮಗಳು ಒಂದನೇ ತರಗತಿ ಓದುತಿದ್ದಳು. ಎರಡನೇ ಬಾರಿ ಶಬರಿ ಮಾಲೆಗೆ ಕರೆದೊಯ್ದಿದ್ದೆ, ಒಳ್ಳೆಯದಾಗಲಿ ಎಂದು ದೇವರ ದರ್ಶನ ಮಾಡಿ ವಾಪಾಸ್ ಆದೆವು. ಆದರೇ, ಈಗ ಹೀಗಾಗಿದೆ” ಎಂದು ಹುಲಗಪ್ಪ ಕಣ್ಣೀರು ಹಾಕಿದ್ದಾರೆ.
ಗಾಯಾಳು ಹುಲಿಗಪ್ಪ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 5 ರಂದು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗಳು 7 ರಂದು ತಲುಪಿದ್ದರು. ಬುಧವಾರ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದಿದ್ದ ಮಾಲಾಧಾರಿಗಳು ಗುರುವಾರ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಮಧ್ಯಾಹ್ನ ತಮಿಳುನಾಡಿನ ಪಳನಿಯಿಂದ ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ಇದೆ.
