LOCAL NEWS : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ : ಶಾಶ್ವತ ಪರಿಹಾರಕ್ಕೆ ಎಸ್ಯುಸಿಐ(ಸಿ) ಆಗ್ರಹ..!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಫೆ.19: ಆರೋಗ್ಯ ಇಲಾಖೆಯ ಅಧೀನದಲ್ಲಿರುವ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವನಾವಶ್ಯಕ ಔಷಧಿಗಳ ತೀವ್ರ ಕೊರತೆ ಉಂಟಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ- ಕಮ್ಯುನಿಸ್ಟ್ (ಎಸ್ಯುಸಿಐ)(ಸಿ ) ರಾಜ್ಯ ಸಮಿತಿ ತಿಳಿಸಿದೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಹಾಗೂ ಜಿಲ್ಲಾ ಮುಖಂಡ ಶರಣು ಗಡ್ಡಿ ಅವರು,’ ಜ್ವರ, ನೆಗಡಿ, ಕೆಮ್ಮು, ಬೇಧಿ, ರಕ್ತದೊತ್ತಡದಂತಹ ಸಾಮಾನ್ಯ ಕಾಯಿಲೆಗಳಿಗೂ ರೋಗಿಗಳಿಗೆ ಹೊರಗಿನಿಂದ ಔಷಧಿ ಖರೀದಿಸಲು ಚೀಟಿ ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಔಷಧಿ ಕೊರತೆಯಿಂದ ಕೆಲ ಶಸ್ತ್ರಚಿಕಿತ್ಸೆಗಳು ಮುಂದೂಡಲ್ಪಡುತ್ತಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಉಲ್ಲೇಖಿಸಿದ ಅವರು, “ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನವರು ಬಡವರು ಹಾಗೂ ಕೂಲಿ ಕಾರ್ಮಿಕರು ಚಿಕಿತ್ಸೆಗೆ ಬರುತ್ತಾರೆ. ಅವರಿಗೆ ಕನಿಷ್ಠ ಉಚಿತ ಚಿಕಿತ್ಸೆ ಒದಗಿಸಲು ಸಾಧ್ಯವಾಗದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಉದಾಹರಣೆ,” ಎಂದು ಕಿಡಿಕಾರಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿ–ಎಆರ್ಕೆ) ಯೋಜನೆ ಜಾರಿಯಾದ ನಂತರ ಅನುದಾನವನ್ನು ಆಸ್ಪತ್ರೆ ಮಟ್ಟದಲ್ಲೇ ಔಷಧಿ ಖರೀದಿಗೆ ಲಿಂಕ್ ಮಾಡಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ತಾತ್ಕಾಲಿಕವಾಗಿ ರೂ.30 ಕೋಟಿ ಬಿಡುಗಡೆ ಮಾಡಿದೆ ಎನ್ನುವ ವರದಿಗಳು ಬಂದಿದ್ದರೂ, ಅದು ಶಾಶ್ವತ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದ ಎಸ್ಯುಸಿಐ(ಸಿ), ತಕ್ಷಣವೇ ಕೊರತೆ ಇರುವ ಎಲ್ಲಾ ಔಷಧಿಗಳನ್ನು ಪೂರೈಕೆ ಮಾಡಬೇಕು, ಸಮಸ್ಯೆ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದಿನಂತೆ ಸರ್ಕಾರವೇ ಅವಶ್ಯಕ ಔಷಧಿಗಳನ್ನು ಉತ್ಪಾದಿಸಿ ವಿತರಿಸಬೇಕು ಹಾಗೂ ಎಬಿ–ಎಆರ್ಕೆ ಅನುದಾನದ ಜೊತೆಗೆ ಔಷಧಿ ಖರೀದಿಯನ್ನು ಲಿಂಕ್ ಮಾಡುವ ಕ್ರಮವನ್ನು ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.