BREAKING : ಭೀಕರ ರಸ್ತೆ ಅಪಘಾತ: ಲಾರಿ-ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಸವಾರರು ಸ್ಥಳದಲ್ಲೇ ಸಾವು!
PV ನ್ಯೂಸ್ ಡಿಜಿಟಲ್ :
ಕುಕನೂರು, ಮೇ 20 : ತಾಲೂಕಿನ ಅಡೂರು-ರಾಜೂರು ಗ್ರಾಮದ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೃಹತ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಅತ್ಯಂತ ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಯಲಬುರ್ಗಾ ತಾಲೂಕಿನ ಬಳೂಟಿಗಿ ಗ್ರಾಮದ ಬಸಣ್ಣ ಗೂಗೇರಿ(ವಯಸ್ಸು 55 ವರ್ಷ) , ಶಂಕ್ರಪ್ಪ ಸುತ್ತರೊಟ್ಟಿ (ವಯಸ್ಸು 48 ವರ್ಷ ) ನಿವಾಸಿಗಳೆಂದು ಗುರುತಿಸಲಾಗಿದೆ. ಬೈಕ್ ವಾಹನ ಸಂಖ್ಯೆ KA 37, EU 0208), (ಬೃಹತ್ ಲಾರಿ ಸಂಖ್ಯೆ : KA 27, B9510), ಈ ಪ್ರಕರಣದಲ್ಲಿ ಹಾವೇರಿ ಜಿಲ್ಲೆ ಅಕ್ಕಿಆಲೂರು ಪಟ್ಟಣದ ಬೃಹತ್ ಲಾರಿ ಆಗಿದ್ದು, ಚಾಲಕ ಮಲ್ಲಪ್ಪ ತಂದೆ ವೀರಪ್ಪನನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ:
ಇಂದು ಸಂಜೆ ಸುಮಾರು 4:30ರ ವೇಳೆಗೆ ಯಲಬುರ್ಗಾ ಕಡೆಯಿಂದ ವೇಗವಾಗಿ ಬಂದ ಸಿಮೆಂಟ್ ಸಾಗಣೆ ಬೃಹತ್ ಲಾರಿಯೊಂದು ಕುಕನೂರು ಕಡೆಯಿಂದ ಬರುತ್ತಿದ್ದ ಬೈಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸವಾರರಿಬ್ಬರು ಲಾರಿಯ ಚಕ್ರದಡಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸಂಜೆ ವೇಳೆ ಲಾರಿ ಚಾಲಕನ ಮತ್ತು ಮಧ್ಯ ಸೇವಿಸಿ ಅತಿ ವೇಗದ ಚಾಲನೆಯೇ ಈ ಘಟನೆಗೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
“ಲಾರಿ ಅತ್ಯಂತ ವೇಗವಾಗಿ ಬರುತ್ತಿತ್ತು. ಬೈಕ್ ಸವಾರರು ತಮ್ಮ ಬದಿಯಲ್ಲೇ ಹೋಗುತ್ತಿದ್ದರೂ, ನಿಯಂತ್ರಣ ತಪ್ಪಿದ ಲಾರಿ ಅವರಿಗೆ ನೇರವಾಗಿ ಡಿಕ್ಕಿ ಹೊಡೆಯಿತು. ಈ ಪರಿಣಾಮ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ”
ಪ್ರತ್ಯಕ್ಷ ದರ್ಶಿ.
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ವರಿಷ್ಟಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಡಿಷನಲ್ ಎಸ್ ಪಿ ಆರ್. ಹೇಮಂತ್ ಕುಮಾರ್, ಹಾಗೂ ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಕುಕನೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಎಸ್ ಪಿ ನಾಯ್ಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಕುಕನೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.