You are currently viewing PV NEWS : ಚಿಕ್ಕಬಳ್ಳಾಪುರ | ತಮ್ಮನ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಅಣ್ಣ: ದಾನಿಗಳ ಸಹಾಯಕ್ಕೆ ಕುಟುಂಬದ ಮನವಿ!

PV NEWS : ಚಿಕ್ಕಬಳ್ಳಾಪುರ | ತಮ್ಮನ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಅಣ್ಣ: ದಾನಿಗಳ ಸಹಾಯಕ್ಕೆ ಕುಟುಂಬದ ಮನವಿ!

PV NEWS : ತಮ್ಮನ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಅಣ್ಣ: ದಾನಿಗಳ ಸಹಾಯಕ್ಕೆ ಕುಟುಂಬದ ಮನವಿ!

PV NEWS ಕನ್ನಡ 24×7

ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವಕನಿಗೆ ಚಿಕಿತ್ಸೆ — ಈಗಾಗಲೇ ₹10 ಲಕ್ಷ ವೆಚ್ಚ; ಮುಂದಿನ ಚಿಕಿತ್ಸೆಗೆ ₹20 ಲಕ್ಷ ಅಗತ್ಯ!

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವಕನ ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವು ದಾನಿಗಳು ಹಾಗೂ ಸಮಾಜದ ಸಹಕಾರ ಕೋರಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಲೂರು ಹೋಬಳಿಯ ಪಾರ್ವತಿಪುರ ತಾಂಡಾ ನಿವಾಸಿ ಶ್ರೀನಿವಾಸ್ ನಾಯಕ್ ಅವರು ಆಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (Acute Lymphoblastic Leukemia–ALL) ಎಂಬ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ತಿಂಗಳ ಹಿಂದೆ ಪತ್ತೆಯಾದ ಕಾಯಿಲೆ..!

ಸುಮಾರು ಮೂರು ತಿಂಗಳ ಹಿಂದೆ ಶ್ರೀನಿವಾಸ್ ಅವರಿಗೆ ಮೂಗಿನಲ್ಲಿ ರಕ್ತಸ್ರಾವ, ತೀವ್ರ ಹೊಟ್ಟೆ ನೋವು ಹಾಗೂ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಪ್ಲೇಟ್‌ಲೆಟ್‌ಗಳ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವುದು ಪತ್ತೆಯಾಯಿತು.

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ವಿವಿಧ ವೈದ್ಯಕೀಯ ಪರೀಕ್ಷೆಗಳ ಬಳಿಕ ರಕ್ತದ ಕ್ಯಾನ್ಸರ್ ಇರುವುದು ದೃಢಪಟ್ಟಿದೆ ಎಂದು ಕುಟುಂಬ ತಿಳಿಸಿದೆ.

ಚಿಕಿತ್ಸೆಗಾಗಿ ಈಗಾಗಲೇ ₹10 ಲಕ್ಷ ವೆಚ್ಚ..!

ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಶ್ರೀನಿವಾಸ್ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಇದುವರೆಗೆ ಸುಮಾರು ₹10 ಲಕ್ಷ ವೆಚ್ಚವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕುಟುಂಬವು ದಿನಗೂಲಿ ಕೆಲಸದ ಆದಾಯವನ್ನು ಅವಲಂಬಿಸಿದ್ದು, ಚಿಕಿತ್ಸಾ ವೆಚ್ಚಕ್ಕಾಗಿ ಸುಮಾರು ₹5 ಲಕ್ಷ ಸಾಲ ಮಾಡಲಾಗಿದೆ. ಜೊತೆಗೆ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ಭರಿಸಲಾಗಿದೆ ಎಂದು ಕುಟುಂಬ ತಿಳಿಸಿದೆ.

ಮುಂದಿನ ಚಿಕಿತ್ಸೆಗೆ ₹20 ಲಕ್ಷ ಅಗತ್ಯ…!

ವೈದ್ಯರ ಸಲಹೆಯಂತೆ ಶ್ರೀನಿವಾಸ್ ಅವರಿಗೆ ದೀರ್ಘಾವಧಿಯ ಚಿಕಿತ್ಸೆ ಹಾಗೂ ಕೆಮೊಥೆರಪಿ ಮುಂದುವರಿಸಬೇಕಿದೆ. ಇದುವರೆಗೆ ಮೂರು ಕೆಮೊಥೆರಪಿ ಸೈಕಲ್‌ಗಳು ಪೂರ್ಣಗೊಂಡಿದ್ದು, ಇನ್ನೂ ಹಲವು ಸೈಕಲ್‌ಗಳು ಬಾಕಿ ಉಳಿದಿವೆ ಎಂದು ಕುಟುಂಬ ತಿಳಿಸಿದೆ.

ಮುಂದಿನ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಆಸ್ಪತ್ರೆಯಿಂದ ನೀಡಿರುವ ಅಂದಾಜಿನ ಪ್ರಕಾರ ಸುಮಾರು ₹20 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಈ ಮೊತ್ತವನ್ನು ಭರಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ದಾನಿಗಳ ನೆರವನ್ನು ಕೋರಲಾಗಿದೆ.

ಚಿಕಿತ್ಸೆಗೆ ನೆರವು ನೀಡುವಂತೆ ಅಣ್ಣನ ಮನವಿ..!

ಶ್ರೀನಿವಾಸ್ ಅವರ ಅಣ್ಣ ವೆಂಕಟೇಶ್ ನಾಯಕ್ ಅವರು ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್‌ ಮೂಲಕ ನೆರವು ಕೋರುತ್ತಿದ್ದಾರೆ.

“ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಕುಟುಂಬ. ಈಗಾಗಲೇ ಸಾಲ ಮಾಡಿದ್ದು, ಮನೆಯಲ್ಲಿದ್ದ ಚಿನ್ನಾಭರಣವನ್ನೂ ಅಡಮಾನ ಇಟ್ಟು ಚಿಕಿತ್ಸಾ ವೆಚ್ಚ ಭರಿಸಿದ್ದೇವೆ. ಮುಂದಿನ ಚಿಕಿತ್ಸೆಗೆ ಇನ್ನಷ್ಟು ಹಣದ ಅಗತ್ಯವಿದೆ. ಸಾಧ್ಯವಾದಷ್ಟು ನೆರವು ದೊರೆತರೆ ಚಿಕಿತ್ಸೆಯನ್ನು ಮುಂದುವರಿಸಲು ಅನುಕೂಲವಾಗುತ್ತದೆ,” ಎಂದು ಅವರು ಮನವಿ ಮಾಡಿದ್ದಾರೆ.

ಶ್ರೀನಿವಾಸ್ ಅವರ ಚಿಕಿತ್ಸೆಗೆ ನೆರವು ನೀಡಲು ಇಚ್ಛಿಸುವವರು ಕುಟುಂಬವನ್ನು ಸಂಪರ್ಕಿಸಿ, ಆಸ್ಪತ್ರೆಯ ದಾಖಲೆಗಳು, ಚಿಕಿತ್ಸಾ ವಿವರಗಳು ಹಾಗೂ ವೆಚ್ಚದ ಅಂದಾಜುಗಳನ್ನು ಪರಿಶೀಲಿಸಿದ ಬಳಿಕ ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.

ರೋಗಿಯ ಹೆಸರು: ಶ್ರೀನಿವಾಸ್ ನಾಯಕ್
ಕಾಯಿಲೆ: ಆಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ALL)
ಚಿಕಿತ್ಸೆ: ಎಂ.ಎಸ್. ರಾಮಯ್ಯ ಆಸ್ಪತ್ರೆ, ಬೆಂಗಳೂರು
ಸ್ವಗ್ರಾಮ: ಪಾರ್ವತಿಪುರ ತಾಂಡಾ, ಗೂಲೂರು ಹೋಬಳಿ
ತಾಲೂಕು: ಬಾಗೇಪಲ್ಲಿ
ಜಿಲ್ಲೆ: ಚಿಕ್ಕಬಳ್ಳಾಪುರ
ಮುಂದಿನ ಚಿಕಿತ್ಸೆಗೆ ಅಂದಾಜು ವೆಚ್ಚ: ಸುಮಾರು ₹20 ಲಕ್ಷ

Prajavikshane

Chandru R Bhanapaur

Leave a Reply

error: Content is protected !!