LOCAL NEWS : ತುಂಗಭದ್ರಾ ಗೇಟ್ ನಂ.19ರ ಕಾಮಗಾರಿ ಜುಲೈ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ – ಸಂಸದ ಕೆ.ರಾಜಶೇಖರ ಹಿಟ್ನಾಳ..!!
ಕೊಪ್ಪಳ : ನಮ್ಮ ಭಾಗದ ರೈತರ ಜೀವ ನಾಡಿಯಾದ ತುಂಗಭದ್ರಾ ಜಲಾಶಯದ ಸ್ಟೀಲ್ ವೇ ಗೇಟ್ ನಂ.19ರ ಕಾಮಗಾರಿಯು 2025ರ ಜುಲೈ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಲ್ಲಾಡಳಿತ ಭವದಲ್ಲಿರುವ ಲೋಕಸಭಾ ಸದಸ್ಯರ ಕಛೇರಿಯಲ್ಲಿ ತುಂಗಭದ್ರಾ ಆಣೆಕಟ್ಟಿಗೆ ಹೊಸ ಸ್ಟೀಲ್ವೇ ಗೇಟುಗಳನ್ನು ಅಳವಡಿಸುವ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ ವರ್ಷ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ಕ್ಕೆ ಸ್ಟಾಪ್ ಲಾಗ್ ಎಲಿಮೆಂಟ್ನ್ನು ಸರ್ಕಾರದ ಅಧಿಕಾರಿಗಳು ಹಾಗೂ ಗೇಟ್ ತಜ್ಞರಾದ ಕನ್ನಯ್ಯ ನಾಯ್ಡು ಮತ್ತು ಗೇಟ್ ತಯಾರಿಕಾ ಕಂಪನಿಗಳಾದ ಜಿಂದಾಲ್ ಸ್ಟೀಲ್ಸ್, ಹಿಂದೂಸ್ಥಾನಿ ಸ್ಟೀಲ್ಸ್ ಹಾಗೂ ನಾರಾಯಣ ಸ್ಟೀಲ್ಸ್ ಸಹಯೋಗದಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.
ಇದಕ್ಕಾಗಿ ರಾಜ್ಯ ಸರ್ಕಾರವು ಬಹಳಷ್ಟು ಪ್ರಯತ್ನಗಳನ್ನು ಮಾಡಿತ್ತು. ಇದರಿಂದಾಗಿ ರೈತರ ಎರಡೂ ಬೆಳೆಗಳಿಗೆ ನೀರು ಕೊಡಲು ಅನುಕೂಲವಾಯಿತು ಎಂದರು. ತುಂಗಭದ್ರಾ ಆಣೆಕಟ್ಟಿನ ಗೇಟ್ಗಳ ಸ್ಥಿತಿ-ಗತಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಜಲ ಆಯೋಗವು (ಸಿ.ಡಬ್ಲ್ಯೂ.ಸಿ) ಒಂದು ಸಮಿತಿಯನ್ನು ರಚಿಸಿದ್ದು, ಸಿ.ಡಬ್ಲ್ಯೂ.ಸಿ.ಯ ನಿವೃತ್ತ ಅಧ್ಯಕ್ಷರಾದ ಎ.ಕೆ.ಬಜಾಜ್ ಅವರ ನೇತೃತ್ವದಲ್ಲಿ ತಾಂತ್ರಿಕ ಪರಿಣಿತರ ತಂಡವು 2025ರ ಏಪ್ರಿಲ್ 9ರಂದು ತುಂಗಭದ್ರಾ ಆಣೆಕಟ್ಟನ್ನು ಪರಿಶೀಲಿಸಿ, ಕಾಂಪ್ರೆನ್ಸಿವ್ ಹೆಲ್ತ್ ಓವರ್ವ್ಯೂವ್ (Comprehensive health overview) ಹಾಗೂ ಆಣೆಕಟ್ಟೆಯ ಸುರಕ್ಷತೆಯ ನಿರ್ವಹಣೆಯ ಬಗ್ಗೆ ಕೈಗೊಳ್ಳಬೇಕಾದ ಅಂಶಗಳ ವಿವರದ ವರದಿಯನ್ನು ನೀಡಿರುತ್ತಾರೆ.
ಎನ್.ಡಿ.ಎಸ್.ಎ ಅಧ್ಯಕ್ಷರಾದ ಅನೀಲ್ ಜೈನ್ ಅವರು ತುಂಗಭದ್ರಾ ಆಣೆಕಟ್ಟನ್ನು ಪರಿಶೀಲಿಸಿ ಜಲಾಶಯದಲ್ಲಿ ಸಾಧ್ಯವಾದಷ್ಟು ಕಡಿಮೆ ಮಟ್ಟದಲ್ಲಿ ನೀರನ್ನು ಶೇಖರಿಸಲು ಹಾಗೂ ಆಣೆಕಟ್ಟಿನ ಕಾಂಪ್ರೆನ್ಸಿವ್ ಹೆಲ್ತ್ ಚೆಕಪ್ (Comprehensive health checkup) ಕೈಗೊಳ್ಳಲು ಸಲಹೆ ನೀಡಿರುತ್ತಾರೆ ಎಂದು ಹೇಳಿದರು. ಕೆ.ಎಸ್.ಎನ್.ಡಿ.ಟಿ ಸರ್ವಿಸಸ್ ರವರು ಡೆ ಪೆನೆಟ್ರೇಷನ್ ಟೆಸ್ಟ್, ಫೆಸ್ಡ್ ಅರೈವ್ ಅಲ್ಟಾçಸೊನಿಕ್ ಟೆಸ್ಟ್ ಮತ್ತು ವಿಜ್ವಲ್ ಇನ್ಸ್ಫೆಕ್ಷನ್ (Dye penetration test, Phased array ultrasonic test and Visual inspection) ಪರೀಕ್ಷೆಗಳನ್ನು ಜಲಾಶಯದ ಎಲ್ಲಾ 32 ಗೇಟುಗಳ ಮೇಲೆ ಕೈಗೊಂಡು 2025ರ ಮಾರ್ಚ್ 25ರಂದು ವರದಿ ನೀಡಿರುತ್ತಾರೆ.
ಈ ವರದಿಯನ್ವಯ ಗೇಟುಗಳ ಬಹುತೇಕ ಭಾಗಗಳ ದಪ್ಪವು (ಥಿಕ್ನೆಸ್) ಮೂಲ ವಿನ್ಯಾಸಕ್ಕಿಂತ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗಿರುವುದಾಗಿ ಹಾಗೂ ಎಲ್ಲಾ ಸ್ಟೀಲ್ವೇ ಗೇಟುಗಳನ್ನು ಬದಲಾಯಿಸಬೇಕಾಗುತ್ತದೆಂದು ತಿಳಿಸಿರುತ್ತಾರೆ. ಇದಲ್ಲದೇ ಆಂದ್ರಪ್ರದೇಶ ಸರ್ಕಾರದ ಸಲಹೆಗಾರರು ಹಾಗೂ ಗೇಟುಗಳ ತಜ್ಞರಾದ ಎನ್.ಕನ್ನಯ್ಯ ನಾಯ್ಡು ಅವರು ಏಪ್ರಿಲ್ 8 ಮತ್ತು 9 ರಂದು ಆಣೆಕಟ್ಟುಗಳ ಸ್ಟೀಲ್ವೇ ಗೇಟುಗಳನ್ನು ಪರಿಶೀಲಿಸಿ ಎಂಡ್ ಕನೆಕ್ಷನ್ಗಳನ್ನು ಸದೃಡ (Strengthen) ಮಾಡಲು ಸಲಹೆ ನೀಡಿರುತ್ತಾರೆ.
ಸ್ಟೆçನಥೆನಿಂಗ್ ಆಪ್ ಗ್ರೀರ್ಸ್ ಟು ಎಂಡ್ ಬಾಕ್ಸ್ (Strengthening of girders to end box) ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಎನ್.ಡಿ.ಟಿ ವರದಿಯನ್ವಯ 2025-26ನೇ ಸಾಲಿನಲ್ಲಿ ಗೇಟುಗಳನ್ನು ಫುಲ್ ಲೋಡಿಂಗ್ (full loading) ಮಾಡಲು ಸಾಧ್ಯವಾಗದೇ ಇರುವುದರಿಂದ ಒಂದು ಬೆಳೆಗೆ ಹಾಗೂ ಕುಡಿಯುವ ನೀರನ್ನು ಪರಿಗಣಿಸಿ ಸಿಲ್ ಲೇವಲ್ (Sill level) ಮೇಲೆ 12 ರಿಂದ 15 ಅಡಿಯವರೆಗೆ ಮಾತ್ರ ನೀರನ್ನು ಶೇಖರಿಸಲು ಸಲಹೆ ನೀಡಿರುತ್ತಾರೆ ಎಂದರು.
ಎನ್.ಕನ್ನಯ್ಯ ನಾಯ್ಡು ಇವರ ಸಲಹೆಯಂತೆ ಆಣೆಕಟ್ಟೆಯ ಗೇಟುಗಳ ಸುರಕ್ಷತೆಯ ಹಿನ್ನಲೆಯಲ್ಲಿ 2025-26ನೇ ಸಾಲಿನ ಜಲಾಶಯದಲ್ಲಿ 1626.06 ಅಡಿಯವರೆಗೆ ಸಾಮರ್ಥ್ಯವನ್ನು 80 ಟಿ.ಎಂ.ಸಿ.ಗೆ ನಿರ್ಬಂಧಿಸಿ ನೀರನ್ನು ಸಂಗ್ರಹಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ತುಂಗಭದ್ರಾ ಮಂಡಳಿಯು ರಾಜ್ಯಗಳ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂದು ಹೇಳಿದರು. ಸ್ಟೀಲ್ವೇ ಗೇಟ್ ನಂ.19ರ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ಸ್ (Stop log gate elements)ಗಳ ತೆಗೆಯುವುದು ಹಾಗೂ ಹೊಸ ಸ್ಟೀಲ್ವೇ ಗೇಟುಗಳನ್ನು ಅಳವಡಿಸುವ ಕಾಮಗಾರಿಯನ್ನು ರೂ.1.66 ಕೋಟಿಗಳಿಗೆ (ಜಿ.ಎಸ್.ಟಿ. ಹೊರತುಪಡಿಸಿ) ಎಂ/ಎಸ್ ಹಾರ್ಡ್ವೆರ್ ಟೂಲ್ಸ್ & ಮಷಿನರಿ ಪ್ರೈ.ಲಿ ಅಹಮದಾಬಾದ್, ಗುಜರಾತ್ ಇವರಿಗೆ ವಹಿಸಲಾಗಿದೆ. ಕಾಮಗಾರಿಯನ್ನು ಜುಲೈ-2025 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಪ್ರಸ್ತುತ ಬಾಕಿ ಉಳಿದ 32 ಸ್ಪೀಲ್ವೇ ಗೇಟುಗಳನ್ನು ತೆಗೆದು ಹೊಸ ಸ್ಪೀಲ್ವೇ ಗೇಟುಗಳನ್ನು ಅಳವಡಿಸುವ ಕಾಮಗಾರಿಗಳಿಗೆ ರೂ.52 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸದರ ಆಪ್ತ ಸಹಾಯಕರಾದ ಅರಣು, ವೀರಭದ್ರಪ್ಪ ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ. ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.