“ಅಳವಂಡಿ : ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಗೆಳೆಯರ ಬಳಗ! ಗಣೇಶನಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಅನ್ನ ಸಂತರ್ಪಣೆ”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್:
ಕೊಪ್ಪಳ : ರಾಜ್ಯದ ಹಲವೆಡೆ ಹಿಂದೂ -ಮುಸ್ಲಿಂ ನಡುವೆ ಗಲಾಟೆಗಳೂ ನಡೆಯುತ್ತವೆ. ಆದರೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಗೆಳೆಯರ ಬಳಗ ಸೇರಿ ಬಜಾರನಲ್ಲಿರುವ ವಿಜಯ ಗಣಪತಿ ಮಂದಿರದಲ್ಲಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಗಣೇಶ ಚತುರ್ಥಿ ಅಂಗವಾಗಿ ದೇವಸ್ಥಾನದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಯಿತು. ನಂತರ ಎರಡೂ ಸಮುದಾಯದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.
ಗಣೇಶ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದು ಕಂಡು ಬಂದಿದೆ. ಗೆಳೆಯರ ಬಳಗದಲ್ಲಿ ಹಿಂದೂ – ಮುಸ್ಲಿಂ ಎರಡು ಸಮಾಜದ ಸದಸ್ಯರ ತಂಡ ಜೊತೆಯಾಗಿದ್ದು, ಪರಸ್ಪರ ಕೂಡಿ ಸೌಹಾರ್ದತೆ ಮೆರೆದಿದ್ದಾರೆ. ಇಲ್ಲಿ ಕೋಮು ಸಂಘರ್ಷದ ಯಾವದೇ ಮಾತೇ ಇಲ್ಲ ಎಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಹಂಚಿಕೊಂಡರು.