“ಕಲಬುರಗಿ | ಅಪ್ಪಾ ಪ್ರೀತಿ ಮಾಡೋದೆ ತಪ್ಪಾ..? ಮರ್ಯಾದೆಗೆ ಅಂಜಿ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ ! ಇಲ್ಲಿದೆ ನೋಡಿ ರಿಯಲ್ ಸ್ಟೋರಿ …!”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್ :
ಕಲಬುರಗಿ : ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆ ಮತ್ತು ಅವಳ ಸಹೋದರ ಸೇರಿ ಕತ್ತು ಹಿಸುಕಿ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ಬುಧುವಾರ ರಾತ್ರಿ ನಡೆದಿದೆ.
ಗ್ರಾಮದ ಯುವತಿ ಕವಿತಾ ಕೊಳ್ಳುರ (18) ಹತ್ಯೆಯಾದ ಯುವತಿ. ಯುವತಿಯ ತಂದೆ ಶಂಕರ ಕೊಳ್ಳುರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಳೀದ ಇಬ್ಬರು ಆರೋಪಿಗಳನ್ನು ಬಂಧಿಸಲು ಪೋಲಿಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
‘ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ ಕವಿತಾ ಮತ್ತು ಅದೇ ಗ್ರಾಮದ ಕುರುಬ ಜಾತಿಯ ಯುವಕ,ಆಟೊ ಚಾಲಕ ಮಾಳಪ್ಪ ಪೂಜಾರಿ ಎಂಬ ಯುವಕನನ್ನು ಯುವತಿ ಪ್ರೀತಿಸುತ್ತಿದ್ದಳು. ‘ಆ ಯುವಕನನ್ನೇ ಮದುವೆ ಆಗುವೆ. ಇಲ್ಲ ಅಂದರೆ ಮನೆ ಬಿಟ್ಟು ಹೋಗುವೆ’ ಎಂದು ಯುವತಿ ಪಟ್ಟು ಹಿಡಿದಿದ್ದಳು ಎಂದು ಕುಟುಂಬದ ಮೂಲದಿಂದ ಮಾಹಿತಿ ತಿಳಿದಿದೆ.
ಈ ಕುರಿತು ಆಗಸ್ಟ್ 27ರಂದು ಯುವತಿ ಹಾಗೂ ಕುಟುಂಬದ ನಡುವೆ ಎರಡು ಮೂರು ಬಾರಿ ಗಲಾಟೆ ಕೂಡಾ ನಡೆದಿತ್ತು. ಮಗಳು ಅನ್ಯಜಾತಿ ಯುವಕನ ಜೊತೆ ಹೋದರೆ, ಮರ್ಯಾದೆ ಹೋಗುತ್ತದೆ ಎಂದುಕೊಂಡು ತಂದೆ ಹಾಗೂ ಇತರ ಇಬ್ಬರು ಕುಟುಂಬದ ವ್ಯಕ್ತಿಗಳು ಸೇರಿಕೊಂಡು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಯುವತಿ ಬಾಯಲ್ಲಿ ಕ್ರಿಮಿನಾಶಕ ಹಾಕಿದ್ದಾರೆ. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿಸಿ, ಆಗಸ್ಟ್ 28ರಂದು ಬೆಳಿಗ್ಗೆ 9 ಗಂಟೆ ಹೊತ್ತಿಗೆ ಶವವನ್ನು ಸುಟ್ಟು ಹಾಕಿದ್ದಾರೆ’ ಎಂದು ಪೊಲೀಸರು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯುವತಿಯ ತಂದೆಯನ್ನು ಸದ್ಯಕ್ಕೆ ಬಂಧಿಸಲಾಗಿದೆ. ಈ ಕೃತ್ಯಕ್ಕೆ ನೆರವಾದ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಕುರಿತು ಫರಹತಾಬಾದ್ ಠಾಣೆ ಪೊಲೀಸರು ಈ ಬಗ್ಗೆ ಮೂವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.