ಪ್ರಜಾವೀಕ್ಷಣೆ ಸುದ್ದಿ :
BREAKING : ಕೊಪ್ಪಳ ಜಿಲ್ಲಿಯಲ್ಲಿ ನಕಲಿ ಯುಡಿಐಡಿ ಕಾರ್ಡ್ (Unique Disability ID Card) ನೀಡುವ ಜಾಲ ಪತ್ತೆ..!

ಕೊಪ್ಪಳ : ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗ ಪ್ರತಿಯೊಬ್ಬರಿಗೂ ಅವಶ್ಯಕವಾಗಿದ್ದು, ಸ್ಪರ್ಧಾತ್ಮಕವಾಗಿ ಇವುಗಳನ್ನು ಪಡೆದುಕೊಳ್ಳುವುದು ಕಷ್ಟ ಸಾಧ್ಯವಾದ ಸಂಗತಿಯಾಗಿದೆ. ಸರ್ಕಾರಿ ಉದ್ಯೋಗ ಹಾಗೂ ಇನ್ನೀತರ ವಿಭಾಗಗಳಲ್ಲಿ ಅವಕಾಶ ಪಡೆಯುವ ಹಂಬಲದಿಂದ ಸುಲಭ ಮಾರ್ಗ ಹುಡುಕಿಕೊಂಡು ನಕಲಿ ವಿಕಲಚೇತನರ ಪ್ರಮಾಣ ಪತ್ರ ಪಡೆದು ಶಿಕ್ಷಣ ಹಾಗೂ ಉದ್ಯೋಗ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ನಕಲಿ ಯುಡಿಐಡಿ ಕಾರ್ಡ್ ನೀಡುವ ಜಾಲ ಕಾರ್ಯ ಪ್ರವೃತ್ತರಾಗಿರುವ ಜಾಲ ಪತ್ತೆಯಾಗಿದೆ.
ರಾಜ್ಯದಲ್ಲಿ ಪ್ರತಿಷ್ಠಿತ ವೈದ್ಯಕೀಯ ಕೋರ್ಸುಗಳ ಸೀಟುಗಳಿಗೆ ಬಹಳಷ್ಟು ಬೇಡಿಕೆ ಇರುವುದು ಗೊತ್ತಿರುವ ವಿಷಯವಾಗಿದ್ದು ಕೋಟ್ಯಾನುಗಟ್ಟಲೆ ಹಣ ಚೆಲ್ಲಿದರು ಸಹ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳು ದೊರೆಯುವುದು ಕಷ್ಟ ಸಾಧ್ಯವಾಗಿದೆ ಆದರೆ ಸರ್ಕಾರ ಅಂಗವಿಕಲರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಿದ್ದು ಕೆಲವರು ಅದನ್ನೇ ಬಂಡವಾಳ ಮಾಡಿಕೊಂಡಿದ್ದು ಕೆಲ ವಿದ್ಯಾರ್ಥಿಗಳು ಹಾಗೂ ಪಾಲಕರು ನಕಲಿ ವಿಕಲಚೇತನರ ಪ್ರಮಾಣ ಪತ್ರ ಮತ್ತು ಯುಡಿಐಡಿ ಕಾರ್ಡ್ ಪಡೆದುಕೊಂಡಿರುವುದು ಸದ್ಯ ಬಟಾ ಬಯಲಾಗಿದ್ದು ಅದರಲ್ಲೂ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೈದ್ಯಾಧಿಕಾರಿಗಳ ಹೆಸರು ಸುತ್ತಿಕೊಂಡಿರುವುದು ಆಶ್ಚರ್ಯ ಕಾರಣವಾಗಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಾಧಿಕಾರಿಯಾದ ಸುಧಾಕರ್ ಎಂಬುವವರು ವೈದ್ಯಕೀಯ ಶಿಕ್ಷಣ ಪಡೆಯುವ ಹಂಬಲವಿರುವ ವಿದ್ಯಾರ್ಥಿಗಳಿಗೆ ವಿಕಲಚೇತನ ಪ್ರಮಾಣ ಪತ್ರ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆ ಪೊಲೀಸರು ಕಳೆದ ವಾರ ಜಿಲ್ಲೆಗೆ ಆಗಮಿಸಿ ಸುಧಾಕರ ಎಂಬ ನೇತ್ರಾಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿರುತ್ತದೆ. ಅಲ್ಲದೆ ಸುಧಾಕರ ಎಂಬ ವ್ಯಕ್ತಿಯನ್ನು ತಮ್ಮ ಸೂಪರ್ತಿಗೆ ತೆಗೆದುಕೊಂಡು ಹೊಸಪೇಟೆ ಸೇರಿದಂತೆ ವಿವಿಧ ಕಡೆ ಸ್ಥಳ ಮಹಜರು, ಹಾಗೂ ಪಂಚನಾಮೆ ಪ್ರಕ್ರಿಯೆ ಮಾಡಿರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಜಾಲದಲ್ಲಿ ಇನ್ನೂ ಯಾರ್ಯಾರು ಸೇರಿಕೊಂಡಿದ್ದಾರೆ ಎಂಬುವ ಪತ್ತೆಹಚ್ಚಲು ಪೊಲೀಸರು ತಲಿಕೆ ಮುಂದುವರಿಸಿದ್ದು ಉದ್ಯೋಗಕ್ಕೂ ಸಹ ನಕಲಿ ಯುಡಿಐಡಿ ಕಾರ್ಡ್ ನೀಡಲಾಗಿದೆ ಎಂಬುದು ಪೊಲೀಸ್ ಕಾರ್ಯಾಚರಣೆಗಳಿಂದ ಬಹಿರಂಗವಾಗಬೇಕಾಗಿದೆ.
ವೈದ್ಯಕೀಯ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಸಮಾಲೋಚನೆಗೆ ಹೋಗಿದ್ದಾರೆ ಕೆಲ ವಿದ್ಯಾರ್ಥಿಗಳು ಅಂಗವಿಕಲ ಕೋಟಾದ ಅಡಿಯಲ್ಲಿ ಅರ್ಜಿ ಸಲ್ಲಿಸಿರುವುದು ಹಾಗೂ ಆಯ್ಕೆ ಪಟ್ಟೆಯಲ್ಲಿ ಅವರ ಹೆಸರು ಬಂದಿರುವುದು ಆಯ್ಕೆಯಾದ ವಿದ್ಯಾರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿದ್ದು ಅಂಗವಿಕಲ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ವೇಳೆ ಅಂಗವಿಕಲ ಪ್ರಮಾಣ ಪತ್ರ ಮತ್ತು ಯುಡಿಐಡಿ ಕಾರ್ಡ್ ಗಳಲ್ಲಿ ಒಂದೇ ರೀತಿ ಸಹಿಗಳಿರುವುದನ್ನು ಅಧಿಕಾರಿಗಳು ಗಮನಿಸಿದ್ದು ಇದರಿಂದ ಅನುಮಾನ ಹುಟ್ಟಿಕೊಂಡಿರುತ್ತದೆ. ಇದೇ ರೀತಿಯಲ್ಲಿ ಇತರೆ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮಾಡುತ್ತಾ ಹೋದಾಗ 21 ವಿದ್ಯಾರ್ಥಿಗಳಲ್ಲಿ ಈ ಪ್ರಕ್ರಿಯೆ ಕಂಡುಬಂದಿದ್ದು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಸುಧಾಕರ ಹೆಸರು ತಳಕು ಹಾಕಿಕೊಂಡಿದೆ ಎಂಬ ಆರೋಪ ಕೇಳಿ ಬಂದಿರುತ್ತದೆ.