LOCAL NEWS : ಗೃಹಲಕ್ಷ್ಮಿ ಹಣದಿಂದ ತನ್ನ ಮೂವರು ಹೆಣ್ಣುಮಕ್ಕಳ ಎಲ್ಐಸಿ ಪಾಲಿಸಿ ಮಾಡಿಸಿದ ಗೃಹಿಣಿ…!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರೆಂಟಿಯಿಂದ ಸಮಾಜದ ಕಟ್ಟ ಕಡೆಯ ಜನತೆಯ ಜೀವನಮಟ್ಟ ಸುಧಾರಿಸುತ್ತಿದೆ. ಎಂದು ಕುಕನೂರು ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಅಭಿಪ್ರಾಯ ಪಟ್ಟರು.
ಇಂದು ಮಂಗಳೂರು ಗ್ರಾಮದಲ್ಲಿ ನಡೆದ”ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿಗಳ ಕಡೆ” ಎಂಬ ಶೀರ್ಷಿಕೆ ಅಡಿಯಲ್ಲಿ ಮಂಗಳೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗುತ್ತಿ ಮಾತನಾಡಿ, ‘ ದೂರ ದೃಷ್ಟಿಕೋನ ಇಟ್ಟುಕೊಂಡು ಸರ್ಕಾರವು ಗ್ಯಾರಂಟಿ ಯೋಜನೆಗಳು ತಂದಿದೆ. ಈ ಯೋಜನೆ ಗಳು ಇಂದು ಬಡ ಜನರ ಜೀವನದ ಆಶ್ರಯಾಗಿ ನಿಂತಿವೆ ಎಂದರೆ ತಪ್ಪಾಗಲಾರದು, ಇದೇ ಗ್ರಾಮದ ಶ್ರೀಮತಿ ಜ್ಯೋತಿ ಕನಕಪ್ಪ ಕಲ್ಲೂರು ಎಂಬ ಗೃಹಿಣಿ, ಈ ಗೃಹಲಕ್ಷ್ಮಿ ಯೋಜನೆಯಿಂದ ಬರುವಂತ ತಿಂಗಳ 2000 ರೂ. ಹಣವನ್ನು ತನ್ನ ಮೂರು ಜನ ಹೆಣ್ಣು ಮಕ್ಕಳ ಹೆಸರ ಮೇಲೆ ಎಲ್ಐಸಿ ಪಾಲಿಸಿ ಮಾಡಿ ತಾಲೂಕಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಹಾಗೂ ಗೃಹ ಜ್ಯೋತಿ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟು ಬದಲಾವಣೆ ಹಾಗೂ ಅನುಕೂಲತೆ ಮಾಡಿವೆ. ಅವರ ಜೀವನಮಟ್ಟ ಸುಧಾರಿಸಲು ಈ ಯೋಜನೆಗಳಿಂದ ಬಹಳಷ್ಟು ಉಪಯುಕ್ತವಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸಂತೋಷ್ ಪಾಟೀಲ್ ಬಿರಾದರ್ ಮಾತನಾಡಿ, ‘ಇಡೀ ರಾಜ್ಯದಲ್ಲಿಯೇ ನಮ್ಮ ಕುಕನೂರು-ಯಲಬುರ್ಗಾ ತಾಲೂಕುಗಳು ಗೃಹಲಕ್ಷ್ಮಿ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದ್ದೇವೆ. ಇದು ಇಲ್ಲಿನ ಶಾಸಕರ ಇಚ್ಛಾ ಶಕ್ತಿ ಹಾಗೂ ಅಧಿಕಾರಿಗಳ ಪರಿಶ್ರಮ ಈ ಕಾರ್ಯವಾಗಿದೆ ಎಂದು ಶ್ಲಾಘಸಿದರು.
ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲಿನ ಸಭೆಗೆ ಅಧಿಕಾರಿಗಳ ಗೈರಾಗಿದ್ದಕ್ಕೆ ಕೋಪಗೊಂಡ ಸಂತೋಷ್ ಪಾಟೀಲ್ ಬಿರಾದರ್
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್, ಕುಕನೂರು ಹಾಗೂ ಅನ್ನಭಾಗ್ಯ ಯೋಜನೆಯ ಅನುಷ್ಠಾನಾಧಿಕಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಲೂಕ ಅಧಿಕಾರಿ ಅವರು ಸಭೆಗಳಲ್ಲಿ ಗೈರಾಗಿದ್ದಕ್ಕೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಮುಂದಿನ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳನ್ನು ಗೈರಾಗದೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಿದರು.
ಇದೇ ವೇಳೆ ಮಂಗಳೂರಿನ ಶ್ರೀಮತಿ ಜ್ಯೋತಿ ಕನಕಪ್ಪ ಕಲ್ಲೂರು ಅವರು ಈ ಗ್ರಹಲಕ್ಷ್ಮಿ ಯೋಜನೆಯಿಂದ ಬರುವ 2000 ರೂ.ಯನ್ನು ತನ್ನ ಮೂರು ಜನ ಹೆಣ್ಣು ಮಕ್ಕಳ ಹೆಸರಿಗೆ ಎಲ್ಐಸಿ ಪಾಲಿಸಿ ಮಾಡಿಸಿರುವುದು ಅತ್ಯಂತ ಶ್ಲಾಘನೀಯ ಸ್ಪೂರ್ತಿದಾಯಕ ಕಾರ್ಯವಾಗಿದೆ. ಈ ಗೃಹಿಣಿಯನ್ನ ಗುರುತಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರುಗಳು, ಕಾರ್ಯ ಮತ್ತು ಪಾಲನಾ ಉಪ ವಿಭಾಗ ಜೇಸ್ಕಾಂ ಕುಕನೂರು, ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ನಾಗರಾಜ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬೇಟದಪ್ಪ ಮಾಳೆಕೊಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಕುದುರೆಮೋತಿ, ಮಂಗಳೂರು, ನೇಲಜೇರಿ, ಹಿರೇಬಿಡನಾಳ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಜೊತೆಗೆ ಸಾರ್ವಜನಿಕರು ಉಪಸ್ಥಿತರಿದ್ದರು.