BIG NEWS : ಗ್ಯಾಸ್ ಸಿಲಿಂಡರ್ ಸ್ಪೋಟ : ಸಂಪೂರ್ಣ ಮನೆ ನೆಲಸಮ.!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಗಂಗಾವತಿ : ಗ್ಯಾಸ್ ಸಿಲಿಂಡರ್ ಅಳವಡಿಕೆ ವೇಳೆ ಸಿಲಿಂಡರ್ ಸ್ಪೋಟಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.
ಗ್ಯಾಸ್ ಸಿಲಿಂಡರ್ ಸ್ಪೋಟದ ತೀವ್ರತೆಗೆ ಶೆಡ್ಡು ಮನೆ ಸಂಪೂರ್ಣ ಕುಸಿದು ಹೋಗಿದೆ. ಭೀಕರ ದುರ್ಘಟನೆಯಲ್ಲಿ ಘಟನೆಯಲ್ಲಿ ಎಂಟು ಜನರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹೆಬ್ಬಾಳ ಗ್ರಾಮದ ಹುಸೇನಮ್ಮ, ನಾಗರಾಜ, ದುರ್ಗಮ್ಮ, ರಾಜ, ಸುರೇಶ, ದುರುಗಪ್ಪ, ವಿಷ್ಣು, ಶ್ರೀಕಾಂತ ಎಂದು ಗುರುತಿಸಲಾಗಿದೆ. ಎಲ್ಲಾ ಗಾಯಾಳುಗಳನ್ನು ಗಂಗಾವತಿ ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಓಪಿಡಿ ಗೆ ಕಳುಹಿಸಲಾಗಿದೆ.
ಈ ದುರ್ಘಟನೆಯ ವಿಷಯ ತಿಳಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಆಹಾರ ಇಲಾಖೆಯ ಡಿಡಿ ಸೋಮಶೇಖರ, ಗಂಗಾವತಿ ಡಿಎಸ್ಪಿ ಜೆ.ನ್ಯಾಮಗೌಡರ, ತಹಶಿಲ್ದಾರ ಯು.ನಾಗರಾಜ ಆಸ್ಪತ್ರೆಗೆ ಭೇಟಿ ಗಾಯಾಳುಗಳನ್ನು ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
*ಮಾನವೀಯತೆ ಮೆರೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮೌನೇಶ ದಡೇಸೂರು:*
ಹೆಬ್ಬಾಳ ಗ್ರಾಮದಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಘಟನೆಯ ಸುದ್ದಿ ತಿಳಿದು ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮೌನೇಶ ದಡೇಸೂರು ಅವರು ಗಾಯಗಳನ್ನು ಭೇಟಿಯಾದರು. ತೀವ್ರ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಓಪಿಡಿ ಗೆ ಕಳಿಹಿಸಲು ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.