KOPPAL NEWS : ಎಫ್ ಐ ಆರ್ ಇಲ್ಲದೇ ಹತ್ತು ವರ್ಷ ಕಾಂಗ್ರೆಸ್ ನಾಯಕರಿಗೆ ತೊಂದರೆ : ಉಗ್ರಪ್ಪ ಬೇಸರ!!
ಕೊಪ್ಪಳ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು, ಇಡಿಯವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ದಾಳಿ ಮಾಡಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಗೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ಮಾಡಿಲ್ಲ. ಕಾನೂನು ಕೂಡಾ ಪಾಲಿಸಿಲ್ಲ. ಈ ಮೂಲಕ ರಾಜಕೀಯ ಒತ್ತಡಕ್ಕೆ ಮಣಿದು ಇಡಿಯವರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಹತಾಶರಾದ ಬಿಜೆಪಿಗರು ಇಡಿ ಮೂಲಕ ದಾಳಿ ಮಾಡಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ, ಜವಾಹರಲಾಲ್ ನೆಹರು ೫ ಸಾವಿರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಪತ್ರಿಕೆಯ ವಿರುದ್ಧ ದಾಳಿ ಮಾಡಿಸಿದ್ದಾರೆ. ಪ್ರಕರಣ ದಾಖಲಿಸದೇ ದಾಳಿ ಮಾಡಿದ್ದಕ್ಕೆ ದೆಹಲಿಯ ವಿಶೇಷ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ರಾಜಕೀಯ ಸೇಡಿನಿಂದ ಇಡಿ ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಕರಣ ಉರ್ಜಿತ ಮಾಡಿದ್ದಾರೆ ಎಂದರು.
ಆರ್.ಎಸ್.ಎಸ್ ಸಂಘಟನೆಯನ್ನೇಕೆ ನೋಂದಾಯಿಸಿಲ್ಲ. ಈ ಸಂಘಟನೆಯು ಲಕ್ಷಾಂತರ ಕೋಟಿ ಹಣವನ್ನು ಗುರುದಕ್ಷಿಣಿ ರೂಪದಲ್ಲಿ ಪಡೆಯುತ್ತಿದ್ದು, ಇದರ ಕೆಳಗೆ ನೂರಾರು ಸಂಸ್ಥೆಗಳಿವೆ. ಅಲ್ಲದೇ ೩ ಸಾವಿರಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಇವರಿಗೆ ಹೇಗೆ ವೇತನ ಪಾವತಿಸುತ್ತೀರಿ. ಇದರ ಸಂಪೂರ್ಣ ಲೆಕ್ಕ ಎಲ್ಲಿದೆ?. ಇದನ್ನೇ ದೇಶದ್ರೋಹ ಎನ್ನುತ್ತಾರೆ ಎಂದರು.
ಮನರೇಗಾ ಹೆಸರು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವರು ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಫೆವಿಕೋಲ್ ಹಾಕಿಕೊಂಡು, ಅಧಿಕಾರಕ್ಕಾಗಿ ಚೇರಿಗೆ ಅಂಟಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿ, ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ರಾಜೀನಾಮೆ ಕೊಡಬೇಕು. ಅಲ್ಲದೇ ಕ್ಷಮೆ ಕೇಳಬೇಕು. ದೇಶದ ಜನರ ಕ್ಷಮೆಯನ್ನು ಯಾಚಿಸಬೇಕು. ಇಲ್ಲವಾದರೆ ದೇಶದ ಜನ ಪ್ರಭುದ್ಧರಿದ್ದು, ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯುತ್ತಾರೆ ಎಂದರು.
ರಾಮ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ್ದಾನೆ. ರಾಮನ ಆಶಯದಂತೆ ಬಿಜೆಪಿಯವರು ನಡೆದುಕೊಳ್ಳುವುದಿಲ್ಲ. ತನ್ನ ಶ್ರೀಮತಿಯನ್ನೇ ರಕ್ಷಣೆ ಮಾಡದ ಪ್ರಧಾನಿ ನರೇಂದ್ರ ಮೋದಿಗೆ ರಾಮನ ಹೆಸರೇಳಲು ಅರ್ಹತೆ ಇದೆಯಾ?. ರಾಮನು ಜಾತಿರಹಿತ, ವರ್ಗರಹಿತ, ಸಮಪಾಲು, ಸಮ ಬಾಳು, ಸಮಾನ ಅವಕಾಶದ ಸಮಾಜ ಕಟ್ಟಿದ್ದರು ಎಂದು ವಾಲ್ಮೀಕಿಯವರು ರಾಮಾಯಣದ ಮೂಲಕ ತಿಳಿಸಿದ್ದರು. ಕೇಂದ್ರದ ಬಿಜೆಪಿ ನಾಯಕರು ರಾಮನ ಆಶಯದಂತೆ ನಡೆಯುತ್ತಿದ್ದೀರಾ?. ನೀವು ರಾಮನಿಗೆ ಗೌರವ ನೀಡುವವರಲ್ಲ. ಮೋದಿ ತಂಡವು ರಾಮನ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಮನ ಆಶಯಕ್ಕೆ ಬದ್ಧವಾಗಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯು ಓಟಿಗಾಗಿ ರಾಮನ ಹೆಸರೇಳುತ್ತಾರೆ. ರಾಮನ ಹೆಸರಲ್ಲಿ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಗಾಂಧೀಜಿ ಹೆಸರನ್ನು ಬದಲಿಸಲು ವಿಕಸಿತ ಭಾರತ ವಿ ರಾಮ್ ಜಿ ಬಿಲ್ ತಂದಿದ್ದಾರೆ. ಇದು ಜನರಿಗೆ ಅರ್ಥವೇ ಆಗುವುದಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಇಟ್ಟಂಗಿ, ಅಕ್ಬರ್ ಪಾಶಾ ಪಲ್ಟನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ಕಿಶೋರಿ ಬೂದನೂರ ಇದ್ದರು.