LOCAL NEWS : ಮೂಲಭೂತ ಸೌಲಭ್ಯಕ್ಕಾಗಿ ಸರಕಾರವನ್ನು ಒತ್ತಾಯಿಸಿದ ಯುವಕನ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು..! : ಈ ಸರ್ಕಾರದ ನಡೆ ಖಂಡನೀಯ : ಸುರೇಶ ಬಳೂಟಗಿ
ಪ್ರಜಾ ವೀಕ್ಷಣೆ ಸುದ್ದಿ :
ಕುಕನೂರು : ಮೂಲಭೂತ ಸೌಲಭ್ಯಕ್ಕಾಗಿ ಸರಕಾರವನ್ನು ಒತ್ತಾಯಿಸಿದ ಯುವಕನ ಮೇಲೆ ಮೊಕದ್ದಮೆ ದಾಖಲಿಸುವುದು ಹತಾಶೆಯ ಪರಮಾವಧಿ ಮತ್ತು ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಇಂದು ಪ್ರಜಾವೀಕ್ಷಣೆ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಯಾದಗಿರಿಯಲ್ಲಿ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಹೋರಾಟ ಮಾಡಿದ ರಾಷ್ಟ್ರೀಯ ಅಥ್ಲೆಟಿಕ್ ಪಟು, ರಾಷ್ಟ್ರಕ್ಕೆ ಮೆಡಲ್ ಪಡೆದ ದೇಶದ ಹೆಮ್ಮೆಯ ಕುವರ ಲೋಕೇಶ ರಾಠೋಡ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಸರಕಾರದ ಹತಾಶ ಭಾವನೆಯನ್ನು ಎತ್ತಿ ತೋರಿಸುತ್ತಿದೆ. ಮಾತೆತ್ತಿದರೆ ಸಂವಿಧಾನ ಮತ್ತು ಡಾ: ಬಿ. ಆರ್.ಅಂಬೇಡ್ಕರ ಅವರ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ತಮ್ಮ ಸರಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ಮತ್ತು ಜನರನ್ನು ದಾರಿ ತಪ್ಪಿಸಲು ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
‘ವಿಶೇಷವಾಗಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಂಜಾರ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ಅವರ ಧ್ವನಿಯನ್ನು ಹತ್ತಿಕ್ಕಿ ತನ್ನ ಏಕ ಚಕ್ರಾಧಿಪತ್ಯವನ್ನು ನಡೆಸುತ್ತಿರುವ ಖರ್ಗೆಯನ್ನು ಮುಂದಿನ ದಿನಗಳಲ್ಲಿ ನಮ್ಮ ಜನ ತಕ್ಕ ಪಾಠ ಕಲಿಸುತ್ತಾರೆ. ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಕೂಡ ಇದೇ ರೀತಿ ಅವರ ವಿರುದ್ಧ ಅನೇಕ ಪ್ರಕರಣ ದಾಖಲಿಸಿ ಅವರನ್ನು ಮೂಲೆಗುಂಪು ಮಾಡಲು ಹೊರಟ ನಿಮ್ಮ ನೀಚ, ಸ್ವಾರ್ಥ ಬುದ್ಧಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದು, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಅಸಮಾಧನ ವ್ಯಕ್ತಪಡಿಸಿದರು.
‘ನಿಮ್ಮ ಈ ನಡೆಯನ್ನು ಈಗಲೇ ಬದಲಿಸಿಕೊಂಡರೆ ಸರಿ ಇಲ್ಲದಿದ್ದರೆ ನಿಮ್ಮ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಒಬ್ಬ ರಾಷ್ಟ್ರೀಯ ಅಥ್ಲೆಟಿಕ್ ಪಟು ಮೇಲೆ ಪ್ರಕರಣ ದಾಖಲು ಮಾಡುತ್ತಿರೆಂದರೆ ಏನು ಅರ್ಥ.ಅವರೇನು ಅತ್ಯಾಚಾರಿಗಳೇ, ಭ್ರಷ್ಟರೇ, ಕೊಲೆಗಡುಗಡುಕರೆ, ಕಳ್ಳತನ ಮಾಡಿ ಸಿಕ್ಕಿದ್ದಾರೆಯೇ, ಏನು ತಪ್ಪು ಮಾಡಿದ್ದಾರೆ ಎಂದು ಕೇಸ್ ಹಾಕಿದ್ದೀರಿ.? ಒಬ್ಬ ಕ್ರೀಡಾಪಟು ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಹೋರಾಟ ಮಾಡಿದ ಎಂಬ ಕಾರಣಕ್ಕೆ ನೀವು ಅವರನ್ನು ಕೇಸ್ ಹಾಕಿ,ಮಾನಸಿಕವಾಗಿ ಕುಗ್ಗಿಸುವ ನಿಮ್ಮ ತಂತ್ರ ನಮಗೆಲ್ಲ ಗೊತ್ತು. ಅಂದು ನಮ್ಮ ದೇಶಕ್ಕೆ ಸ್ವತಂತ್ರ ತರಲು ಬ್ರಿಟಿಷರ ವಿರುದ್ಧ ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ನಾವು ಇಂದು ನಾವೇ ಒಪ್ಪಿಕೊಂಡ,ಅಪ್ಪಿಕೊಂಡ ಸರ್ಕಾರದ ವಿರುದ್ಧ ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ಮಾಡಿ ಮತ್ತೇ ಜೈಲು ಶಿಕ್ಷೆ ಅನುಭವಿಸುತ್ತಿರುವುದು ದುರಂತದ ವಿಷಯವಾಗಿದೆ.
‘ಹೀಗಾಗಿ ಅಹಿಂದ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಸಚಿವರು ಮಾಡುತ್ತಿರುವ ಘನಂದಾರಿ ಕೆಲಸಗಳು, ಇದೇನಾ ನಿಮ್ಮ ಸಂವಿಧಾನ ರಕ್ಷಣೆ ಮಾಡುವ ವಿಧಾನ, ಇದೇನಾ ಬಡ ದಲಿತರ ಉದ್ಧಾರ ಮಾಡುವ ಕಾರ್ಯ.ರಾಜ್ಯದಲ್ಲಿ ಜನರ ನೆಮ್ಮದಿ ಕೆಡಿಸಿ ನಿಮ್ಮ ಬೆಳೆ ಬೇಯಿಸಿಕೊಳ್ಳಲು ಅಮಾಯಕ ಹೋರಾಟಗಾರರ ಧ್ವನಿ ತಗ್ಗಿಸಲು ಇಂಥ ವಾಮ ಮಾರ್ಗ ಅನುಸರಿಸುತ್ತಿರುವುದು ನಾಚಿಕೆಗೇಡಿನ ವಿಷಯ. ದಿನ ದಲಿತರ ದೊರೆಯಾಗಿದ್ದ ಡಿ.ದೇವರಾಜ ಅರಸರ ದಾಖಲೆ ಮುರಿದೆ ಎಂದು ದೊಡ್ಡಸ್ತಿಕೆ ತೋರಿಸುವುದಲ್ಲ,ಅವರ ಥರ ಅಭಿವೃದ್ಧಿ ಕೆಲಸ ಮಾಡಿ ತೋರಿಸಿ, ಆಗ ಜನ ಹೇಳಬೇಕು ಆಡಳಿತ ಮಾಡಿದರೆ ಸಿದ್ದರಾಮಯ್ಯನವರ ಥರ ಅಭಿವೃದ್ಧಿ ಕೆಲಸ ಮಾಡಬೇಕು ಎಂದು. ಅದು ಬಿಟ್ಟು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುವುದಲ್ಲ ಸಾಧನೆ. ರಾಜ್ಯದಲ್ಲಿ ನಿಮ್ಮ ಶಾಸಕರ, ಸಚಿವರದೌರ್ಜನ್ಯ , ದಬ್ಬಾಳಿಕೆ ಕಡೆ ನಿಮ್ಮ ಗಮನ ಇರಲಿ,ಅವರಿಗೆ ಸ್ವಲ್ಪ ಬುದ್ಧಿ ಹೇಳಿ, ಅಂಕುಶ ಹಾಕಿ,ಇಲ್ಲದಿದ್ದರೆ ರಾಮರಾಜ್ಯ ಆಗಿರುವ ಕರ್ನಾಟಕ ರಾವಣ ರಾಜ್ಯ ಆಗುವುದರಲ್ಲಿ ಸಂದೇಹವೇ ಇಲ್ಲ. ಇನ್ನೂ ಈ ರಾಜ್ಯದ ಗೃಹಮಂತ್ರಿ ಡಾ.ಜಿ.ಪರಮೇಶ್ವರ ಅವರಂತೂ ತಮಗೂ ಈ ರಾಜ್ಯಕ್ಕೂ ಏನೂ ಸಂಬಂಧ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಅವರಿಗೆ ಏನೇ ಕೇಳಿದರೂ ನನಗೆ ವಿಷಯ ಇನ್ನೂ ಗೊತ್ತಿಲ್ಲ, ಅಧಿಕಾರಿಗಳ ಜೊತೆ ಚರ್ಚಿಸಿ ಮಾತಾಡುತ್ತೇನೆ ಎನ್ನುವ ಉಡಾಫೆ ಉತ್ತರ ಕೊಡುವ ಅಸಮರ್ಥ ಸಚಿವರಾಗಿದ್ದಾರೆ. ಹೀಗಾಗಿ ಇನ್ನೂ ಮುಂದಾದರೂ ದೀನದಲಿತರನ್ನು ಹೋರಾಟಗಾರರನ್ನು ಹತ್ತಿಕ್ಕುವ ಇಂಥ ಕೆಲಸ ಬಿಟ್ಟು ರಾಜ್ಯದ ಅಭಿವೃದ್ಧಿ, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಕಾರ್ಯ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದರು.