LOCAL NEWS : ಕ.ರ.ವೇ ಸ್ವಾಭಿಮಾನಿ ಬಣದಿಂದ ಸಮಾಜಮುಖಿ ಕಾರ್ಯ : ರಾಜ್ಯ ಸಂಚಾಲಕ ಭರತ ರಾಮೇಗೌಡ

ಪ್ರಜಾ ವೀಕ್ಷಣೆ ಸುದ್ದಿ :
ಕುಕನೂರು : ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಕೇವಲ ನಾಮಫಲಕಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ರಾಜ್ಯದ ಗ್ರಾಮೀಣ ಜನರ ಸಮಸ್ಯೆಗಳಿಗೆ ಧ್ವನಿಯಾಗಿದೆ ಎಂದು ಕ.ರ.ವೇ ಸ್ವಾಭಿಮಾನಿ ಬಣದ ರಾಜ್ಯ ಸಂಚಾಲಕ ಭರತ ರಾಮೇಗೌಡ ಹೇಳಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕುಕನೂರು ತಾಲೂಕ ಕಾರ್ಮಿಕ ಘಟಕದ ನೂತನ ಪದಾಧಿಕಾರಿಗಳ ಅಧಿಕೃತ ಆದೇಶ ಪತ್ರವನ್ನು ನೀಡಿ ಬಳಿಕ ಮಾತನಾಡಿದ ಭರತ ರಾಮೇಗೌಡ, ‘ರಾಜ್ಯದಲ್ಲಿ ಎಷ್ಟೋ ಸಂಘಟನೆಗಳು ಕೇವಲ ನಾಮಫಲಕಕ್ಕೆ ಸೀಮಿತವಾಗಿರುವುದು ವಿಪರ್ಯಾಸ ಸಂಗತಿ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನಾಡು-ನುಡಿ, ನೆಲ-ಜಲ ಕನ್ನಡ ಸಂಸ್ಕೃತಿ ಉಳಿವಿಗಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿದೆ ಎಂದರು.

ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಸದಸ್ಯರನ್ನು ಹೊಂದಿದ್ದು, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 83 ಗ್ರಾಮಗಳಲ್ಲಿ ಗ್ರಾಮ ಘಟಕವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಕ.ರ.ವೇ ಸ್ವಾಭಿಮಾನಿ ಬಣ ಕಾರ್ಯನಿರ್ವಹಿಸಲಿದೆ. ಕೇವಲ ಹೇಳಿಕೊಳ್ಳಲು ಮಾತ್ರವಲ್ಲದೇ ಮೂಲಭೂತ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ನಮ್ಮ ಬಣವು ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಹೇಳಿದರು.
