LOCAL NEWS : “ಮೋಸಕ್ಕೊಳಗಾದ ರೈತರಿಗೆ ನ್ಯಾಯ : ಪಿಎಸ್ಐ ಟಿ. ಗುರುರಾಜ್ ಅವರಿಗೆ ರೈತ ಸಂಘದಿಂದ ಸನ್ಮಾನ..!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ರೈತರ ಪರ ಕಾಳಜಿ ತೋರಿದ ಪಟ್ಟಣ ಆರಕ್ಷಕ ಠಾಣೆಯ ಪಿಎಸ್ಐ ಟಿ. ಗುರುರಾಜ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣ ರೆಡ್ಡಿ) ಬಣದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಬನ್ನಿಕೊಪ್ಪ ಗ್ರಾಮದ ರೈತರ ಕಡಲೆಯನ್ನು ತುಂಬಿಸಿಕೊಂಡು ತೂಕದಲ್ಲಿ ಮೋಸ ಮಾಡಿದ್ದಲ್ಲದೇ, ಖರೀದಿ ಹಣ ನೀಡದೇ ಪರಾರಿಯಾಗಿದ್ದ ಕಡಲೆ ವ್ಯಾಪಾರಿಯನ್ನು ಪತ್ತೆಹಚ್ಚಿ, ರೈತರಿಗೆ ಹಣ ಮರಳಿ ದೊರಕುವಂತೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ತಾಲೂಕ ಅಧ್ಯಕ್ಷ ದೇವಪ್ಪ ಸೋಬನಾದ ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮಂಡಲಗಿರಿ ಗ್ರಾಮದ ಮೂವರು ರೈತರು, ಬೆದವಟ್ಟಿಯ ಒಬ್ಬ ರೈತ ಹಾಗೂ ಅರಕೇರಿಯ ಒಬ್ಬ ರೈತನ ಕುಟುಂಬಗಳಿಗೆ ಆರ್ಥಿಕ ನೆರವು ದೊರಕಲು ಅಗತ್ಯ ಸಹಕಾರ ನೀಡಿರುವುದನ್ನು ಮೆಚ್ಚಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರ ರೈತರ ಖಾತೆಗೆ ಜಮೆಯಾಗಲು ಸಹಕರಿಸಿರುವುದು ಗಮನಾರ್ಹ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವು ಬಂಗಿ, ಮಲ್ಲಪ್ಪ ಚಳ್ಳಮರದ, ಶರಣಪ್ಪ ಚಂಡೂರ, ಬಸಪ್ಪ ಸಬರದ, ಬಸಪ್ಪ ಮಂಡಲಗಿರಿ, ಉಮೇಶ ಬೆದವಟ್ಟಿ, ಬಸಪ್ಪ ಲಾಳಗೊಂಡರ, ಬಸವರಾಜ ಕುರಿ, ಬಸವರಾಜ ದಿವಟರ್, ಈರಪ್ಪ ಕೂಡ್ಲೂರ, ಶಿವು ಯತ್ನಟ್ಟಿ, ಯಲ್ಲಪ್ಪ ಕಲಾಲ, ಈರಪ್ಪ ದ್ಯಾಂಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.