KOPPAL NEWS : ಕೊಪ್ಪಳ | ಹಿರೇಬಗನಾಳ ರೈತರು ಶಾಸಕ ರಾಘವೇಂದ್ರ ಹಿಟ್ನಾಳ ತರಾಟೆ : ಮುಖ್ಯಮಂತ್ರಿ ಅವರನ್ನು ಕರೆತರುವಂತೆ ಆಗ್ರಹ..!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ :
ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಭೇಟಿ ನೀಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ನೂರಾರು ರೈತರು ತರಾಟೆ ತೆಗೆದುಕೊಂಡರು.
ತಮ್ಮ ಗ್ರಾಮದಲ್ಲಿ ಬೀಳುತ್ತಿರುವ ಧೂಳಿನ ಸಮಸ್ಯೆಯನ್ನು ವ್ಯಕ್ತಪಡಿಸಲು ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕರೆತರುವಂತೆ ಆಗ್ರಹಿಸಿದರು.
“ರಾಜ್ಯದ ಅಧಿಕಾರದಲ್ಲಿರುವ ಸಿಎಂ ಅವರನ್ನು ಕರೆತರಬೇಕು. ನಾವು ಅವರಿಗೆ ಗ್ರಾಮ ಸುತ್ತಾಡಿಸಿ ಧೂಳಿನ ನಿಜವಾದ ಪರಿಸ್ಥಿತಿಯನ್ನು ತೋರಿಸುತ್ತೇವೆ. ಮಿತಿಮೀರಿದ ಧೂಳು ನಮ್ಮ ಜೀವವನ್ನು ಹಾಳು ಮಾಡುತ್ತಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಧೂಳು ಹೊರಸೂಸುವ ಕಾರ್ಖಾನೆಗಳು ಇಲ್ಲಿಗೆ ಬೇಡ. ಆಟೋಮೈಬಲ್ ತಯಾರಿಸುವ ಕಾರ್ಖಾನೆಗಳು ಬೇಕಾದರೆ ಮಾತ್ರ ನಮಗೆ ವಿರೋಧವಿಲ್ಲ,” ಎಂದು ರೈತರು ಹೇಳಿದರು.
ಸ್ಥಳೀಯ ತಜ್ಞರ ಸಮಿತಿ ವರದಿ ಪ್ರಕಾರ, ಸ್ಪಾಂಜ್ ಐರಾನ್ ಕಾರ್ಖಾನೆಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ, ಆದರೆ ಮುಚ್ಚುವ ಕ್ರಮ ಕೈಗೊಳ್ಳಲಾಗಿಲ್ಲ. ರೈತರು ಶಾಸಕರನ್ನು ಪ್ರಶ್ನಿಸಿದರು, “ಇಂಥ ಕಾರ್ಖಾನೆಗಳ ಮೇಲೆ ಕ್ರಮ ಏಕೆ ಕೈಗೊಳ್ಳಲಾಗುತ್ತಿಲ್ಲ?”
ಇದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಪ್ರತಿಕ್ರಿಯಿಸಿ, “ಬೇಡವೆಂದರೂ ರೈತರು ತಮ್ಮ ಭೂಮಿಯನ್ನು ಕಂಪನಿಗಳಿಗೆ ಕೊಡುತ್ತಿದ್ದಾರೆ. ವಿಂಡ್ ಪವರ್, ಸೌಲಾರ್ ಕಂಪನಿಗಳಿಗೆ ಸಹ ಭೂಮಿ ನೀಡುತ್ತಿದ್ದಾರೆ. ನೀರಾವರಿ ಒದಗಿಸುತ್ತೇವೆ ಎಂದರೂ ಅವರು ತಮ್ಮ ಭೂಮಿಯನ್ನು ನೀಡುತ್ತಿದ್ದಾರೆ,” ಎಂದರು.
ಆದರೆ ಶಾಸಕರು ಕಾರಿನಲ್ಲಿ ತೆರಳುತ್ತಿದ್ದಂತೆ ರೈತರು ಧಿಕ್ಕಾರ ಹೇಳಿ, “ಇಲ್ಲಿನ ಧೂಳಿನ ಪರಿಸ್ಥಿತಿಯನ್ನು ಸ್ವತಃ ನೋಡಿ, ಊರಲ್ಲಿ ಸುತ್ತಾಡಿ ನೋಡಿ. ಸಮಸ್ಯೆಯನ್ನು ಗಮನಿಸಿ ಕ್ರಮ ಕೈಗೊಳ್ಳಿ,” ಎಂದರು.