LOCAL NEWS : ಲಿಂಗ ತಾರತಮ್ಯ ಮುಕ್ತ ಸಮಾಜ ನಮ್ಮ ಗುರಿ : ಸಿಡಿಪಿಓ ಬೆಟ್ಟದೇಶ್ ಮಾಳೆಕೊಪ್ಪ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಮಾ. 08 : ‘ಇಂದು ವಿಶ್ವ ಮಹಿಳಾ ದಿನಾಚರಣೆ. ಈ ದಿನವನ್ನು ನಾವು ಕೇವಲ ಹಬ್ಬದಂತೆ ಆಚರಿಸುವುದಲ್ಲ, ಸಮಾಜದಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಇರುವ ‘ಲಿಂಗ ತಾರತಮ್ಯ’ ಎಂಬ ಗೋಡೆಯನ್ನು ಕೆಡವಲು ಸಂಕಲ್ಪ ಮಾಡುವ ದಿನವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ್ ಮಾಳೆಕೊಪ್ಪ ಅಭಿಪ್ರಾಯ ಪಟ್ಟರು.
ಇಂದು (ಮಾರ್ಚ್ 8, ರವಿವಾರ) ಬಳಗೇರಿ ಗ್ರಾಮದಲ್ಲಿ ಬಳಗೇರಿ ಗ್ರಾಮ ಪಂಚಾಯಿತಿ ಮತ್ತು ವಿಸ್ತಾರ “ಕನಸು ಕಿಶೋರಿ ಸಂಘಟನೆ”ಯ ಸಹಯೋಗದಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಗುವಿಗೆ ನೀಡುವ ಶಿಕ್ಷಣದಲ್ಲಿ “ಇದು ಹುಡುಗರಿಗೆ, ಇದು ಹುಡುಗಿಯರಿಗೆ” ಎಂದು ನಾವು ವಿಂಗಡಿಸುತ್ತೇವೆ. ಹೆಣ್ಣುಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಹಳೆಯ ಕಾಲದ ಚಿಂತನೆ ಇಂದಿಗೂ ಸಮಾಜದ ಯಾವುದೋ ಮೂಲೆಯಲ್ಲಿ ಜೀವಂತವಾಗಿದೆ ಇದು ದೊಡ್ಡ ತಪ್ಪು, ಇದರಿಂದ ಆಚೆಗೆ ನಾವು ಬರಬೇಕಾಗಿದೆ ಎಂದರು.
ಇದೆ ವೇಳೆಯಲ್ಲಿ ಪ್ರಗತಿಪರ ರೈತ ಮಹಿಳೆಯಾರಾದ ಸಂಪವ್ವ ಯಲ್ಲಪ್ಪ ಹಿರೇಮನಿ, ಈರಮ್ಮ ಹೊಂಬಳ, ಸಾವಿತ್ರ ಸೇರಿದಂತೆ ಮಹಿಳಾ ಸಾಧಕರನ್ನ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರ್ತಿ ಸಮಾಜ ಚಿಂತಕಿಯಾದಂತ ಸರೋಜಾ ಬಾಕಳೆ ಮಾತನಾಡಿ, ‘ಮಹಿಳಾ ದಿನಾಚರಣೆ ಎಂದರೆ ಕೇವಲ ಹೂವು ಕೊಟ್ಟು ಶುಭಾಶಯ ಕೋರುವುದಲ್ಲ; ಇದು ಮಹಿಳೆಯರ ಹಕ್ಕುಗಳಿಗಾಗಿ ನಾವು ನಡೆಸುತ್ತಿರುವ ಹೋರಾಟದ ಪುನರ್ಮನನ ಮಾಡುವ ದಿನ’ ಎಂದರು.
‘ಒಬ್ಬ ಗಂಡಸು ಕಲಿತರೆ, ಆ ವ್ಯಕ್ತಿ ಮಾತ್ರ ಉದ್ದಾರವಾಗುತ್ತಾನೆ, ಆದರೆ, ಒಬ್ಬ ಹೆಣ್ಣು ಕಲಿತರೆ ಇಡೀ ಕುಟುಂಬವೇ ಅಕ್ಷರಸ್ಥವಾಗುತ್ತದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಸ್ತಾರ್ ಸಂಸ್ಥೆಯ ಹಣಕಾಸು ಮತ್ತು ಆಡಳಿತ ಅಧಿಕಾರಿ ಯೇಸುಫ್ ಡಿಜೆ, ಈ ಸಂಸ್ಥೆಯ ಸಂಯೋಜಿಕಿಯರಾದ ಜಯಶ್ರೀ, ಕುಸುಮ, ಕ್ಯಾಂಪಿನ್ ಫೆಸಿಲಿಟೇಟರ್ ಆದ ಆಲಿಸಬ್, ಕವಿತಾ, ಅನ್ವರ್ ಪಾಸಾ, ಲಕ್ಷ್ಮಿ ಬಳಗೇರಿ, ಶರಣಪ್ಪ ಬುದಗುಂಪಿ, ಪೋಸ್ಟ್ ಮಾಸ್ಟರ್ ರಾಧಿಕಾ, ಚೈತ್ರಾ ಕಟ್ಟಿಮನಿ, ವಿಸ್ತಾರ ಸಂಸ್ಥೆಯ ಸಂಘಟಕರು ಹಾಗೂ ಸ್ವ ಸಹಾಯ ಮಹಿಳಾ ಗುಂಪಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಕಿಶೋರಿಯರು ಭಾಗವಹಿಸಿದ್ದರು.