LOCAL NEWS : ಸತ್ಯ ಸಾಯಿ ಗ್ರಾಮದ ಸುವರ್ಣ ಮಹೋತ್ಸವದಲ್ಲಿ ಕೊಪ್ಪಳ ವಿದ್ಯಾರ್ಥಿಗಳ ಕರಾಟೆ ಪ್ರದರ್ಶನ ಮಿಂಚು!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಜುಲೈ 6 : ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಜುಲೈ 5ರಂದು ಆರಂಭವಾದ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ–2026 ಹಾಗೂ ಸತ್ಯ ಸಾಯಿ ಗ್ರಾಮದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳದ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ವಿದ್ಯಾರ್ಥಿಗಳು ನೀಡಿದ ಕರಾಟೆ ಮತ್ತು ನನ್ಚಕು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳದ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಮತ್ತು ತುಮಕೂರಿನ ಶ್ರೀ ಸತ್ಯ ಸಾಯಿ ಕರುಣಾನಿಕೇತನಂ ವಿದ್ಯಾರ್ಥಿಗಳು ಜಂಟಿಯಾಗಿ ಪ್ರದರ್ಶಿಸಿದ ಸಾಹಸಮಯ ಕರಾಟೆ ಕಲೆ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾರ್ಥಿಗಳು ಮೂಲಭೂತ ಕರಾಟೆ ತಂತ್ರಗಳು, ಕರಾಟೆ ಕಟಾ, ನನ್ಚಕು ಪ್ರದರ್ಶನ, ನನ್ಚಕು ಕಟಾ, ಅಗ್ನಿವಲಯದೊಳಗೆ ಜಿಗಿಯುವ ಸಾಹಸ ಹಾಗೂ ಟೈಲ್ ಒಡೆಯುವ ಪ್ರದರ್ಶನಗಳ ಮೂಲಕ ತಮ್ಮ ದೈಹಿಕ ಸಾಮರ್ಥ್ಯ, ಶಿಸ್ತು, ಧೈರ್ಯ ಮತ್ತು ತಂಡದ ಸಮನ್ವಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು. ಅವರ ಪ್ರದರ್ಶನಕ್ಕೆ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಸತ್ಯ ಸಾಯಿ ಗ್ರಾಮದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಈ ಉತ್ಸವದಲ್ಲಿ 22 ವಸತಿ ಶಾಲಾ ಕ್ಯಾಂಪಸ್ಗಳು ಹಾಗೂ ನಾಲ್ಕು ವಿಶ್ವವಿದ್ಯಾಲಯ ಕ್ಯಾಂಪಸ್ಗಳ ಸುಮಾರು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮೆರವಣಿಗೆ, ಮಾರ್ಚ್ಪಾಸ್ಟ್, ಧ್ವಜಾರೋಹಣ, ಕ್ರೀಡಾ ಪ್ರತಿಜ್ಞೆ ಹಾಗೂ ಜ್ಯೋತಿ ಪ್ರಜ್ವಲನೆಯೊಂದಿಗೆ ಉತ್ಸವಕ್ಕೆ ಭವ್ಯ ಚಾಲನೆ ನೀಡಲಾಯಿತು.
ಉತ್ಸವದಲ್ಲಿ ಯಕ್ಷಗಾನ, ಕಂಸಾಳೆ, ಗರ್ಬಾ, ಭಾಂಗ್ರಾ, ದಾಂಡಿಯಾ ಸೇರಿದಂತೆ ವಿವಿಧ ರಾಜ್ಯಗಳ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆದವು. ಜೊತೆಗೆ ಜಿಮ್ನಾಸ್ಟಿಕ್ಸ್, ಸ್ಕೇಟಿಂಗ್, ಬ್ಯಾಸ್ಕೆಟ್ಬಾಲ್, ಏರಿಯಲ್ ಹೂಪ್ಸ್ ಹಾಗೂ ಸೈಕಲ್ ಸಾಹಸ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.
ಜುಲೈ 11ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಭಕ್ತಿಪರ, ಬೌದ್ಧಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ವಿವಿಧ ಕ್ಯಾಂಪಸ್ಗಳ ವಿದ್ಯಾರ್ಥಿಗಳು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ತಂಡಗಳಡಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.