LOCAL EXPRESS : ಕುಕನೂರು ತಾಲೂಕು ಪಂಚಾಯತ್ ನೂತನ ಪ್ರಭಾರಿ ಇಒ ಆಗಿ ಬೆಟದೇಶ್ ಮಾಳೇಕೊಪ್ಪ ಅಧಿಕಾರ ಸ್ವೀಕಾರ!
“ಜನಸ್ನೇಹಿ, ಪಾರದರ್ಶಕ ಮತ್ತು ಅಭಿವೃದ್ಧಿಮುಖ ಆಡಳಿತಕ್ಕೆ ಆದ್ಯತೆ” – ಪ್ರಭಾರಿ ಇಒ ಬೆಟದೇಶ್ ಮಾಳೇಕೊಪ್ಪ!
PV NEWS ಕನ್ನಡ 24×7 :
ಕುಕನೂರು, ಜುಲೈ 9: ಯಲಬುರ್ಗಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಬೆಟದೇಶ್ ಮಾಳೇಕೊಪ್ಪ ಅವರು ಕುಕನೂರು ತಾಲೂಕು ಪಂಚಾಯತಿಯ ನೂತನ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಇಒ) ಆಗಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಕುಕನೂರು ತಾಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸಂತೋಷ್ ಬಿರಾದಾರ್ ಪಾಟೀಲ್ ಅವರು ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ಬೆಟದೇಶ್ ಮಾಳೇಕೊಪ್ಪ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ಅಧಿಕಾರ ಸ್ವೀಕಾರದ ಬಳಿಕ ತಾಲೂಕು ಪಂಚಾಯತಿ ಕಚೇರಿಯಲ್ಲಿ ನೂತನ ಪ್ರಭಾರಿ ಇಒ ಅವರನ್ನು ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಹೂಗುಚ್ಛ ನೀಡಿ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರಿ ಇಒ ಬೆಟದೇಶ್ ಮಾಳೇಕೊಪ್ಪ, “ಕುಕನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾರ್ವಜನಿಕರು ಯಾವುದೇ ತೊಂದರೆ ಇಲ್ಲದೆ ಸರ್ಕಾರಿ ಸೇವೆಗಳನ್ನು ಪಡೆಯುವಂತೆ ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಗ್ರಾಮ ಪಂಚಾಯಿತಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರ ಸಹಕಾರದೊಂದಿಗೆ ಕುಕನೂರು ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ ಹೊಂದಿದ್ದೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿವಿಧ ಇಲಾಖೆಗಳ ಪ್ರಮುಖರು ಉಪಸ್ಥಿತರಿದ್ದು, ನೂತನ ಪ್ರಭಾರಿ ಇಒ ಅವರಿಗೆ ಶುಭ ಹಾರೈಸಿದರು.