You are currently viewing P.V SPECIAL STORY : ಕುಕನೂರು |ಚಿತ್ರಗಳೇ ಹೇಳುತ್ತಿವೆ ಕಹಿ ಸತ್ಯ : ರೈತರ ಬದುಕಿಗೆ ಸಂಕಷ್ಟದ ಹಾದಿಯಾದ ಕುದುರಿಮೋತಿ–ಚಿಲಕಮುಖಿ ಸಂಪರ್ಕ ರಸ್ತೆ!

P.V SPECIAL STORY : ಕುಕನೂರು |ಚಿತ್ರಗಳೇ ಹೇಳುತ್ತಿವೆ ಕಹಿ ಸತ್ಯ : ರೈತರ ಬದುಕಿಗೆ ಸಂಕಷ್ಟದ ಹಾದಿಯಾದ ಕುದುರಿಮೋತಿ–ಚಿಲಕಮುಖಿ ಸಂಪರ್ಕ ರಸ್ತೆ!

P.V SPECIAL STORY : ಕುಕನೂರು |ಚಿತ್ರಗಳೇ ಹೇಳುತ್ತಿವೆ ಕಹಿ ಸತ್ಯ : ರೈತರ ಬದುಕಿಗೆ ಸಂಕಷ್ಟದ ಹಾದಿಯಾದ ಕುದುರಿಮೋತಿ–ಚಿಲಕಮುಖಿ ಸಂಪರ್ಕ ರಸ್ತೆ!

ಕುದುರಿಮೋತಿ–ಚಿಲಕಮುಖಿ ಸಂಪರ್ಕ ರಸ್ತೆ ದಶಕಗಳಿಂದ ನಿರ್ಲಕ್ಷ್ಯಕ್ಕೆ ಬಲಿ; ರೈತರ ಬದುಕಿಗೆ ಸಂಕಷ್ಟದ ಹಾದಿ..!!

ವಿಶೇಷ ವರದಿ : ಚಂದ್ರು ಆರ್. ಭಾನಾಪುರ್, ಸಂಪಾದಕರು. 

ಪ್ರಜಾವೀಕ್ಷಣೆ ಡಿಜಿಟಲ್ ವಿಶೇಷ ವರದಿ 

ಕುಕನೂರು, ಜುಲೈ 08 : ಯಲಬುರ್ಗಾ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಹೆಸರಾಗಿರುವ ಕ್ಷೇತ್ರಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ವಿಶೇಷವಾಗಿ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಈ ಕ್ಷೇತ್ರವನ್ನು ಮಾದರಿಯಾಗಿ ಬಿಂಬಿಸಲಾಗುತ್ತದೆ. ಆದರೆ ಆ ಅಭಿವೃದ್ಧಿಯ ಹೊಳಪಿನ ಹಿಂದೆ, ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಬಾರದ ಮತ್ತೊಂದು ವಾಸ್ತವ ಚಿತ್ರವಿದೆ.

ಕುಕನೂರು ತಾಲೂಕಿನ ಕುದುರಿಮೋತಿ–ಚಿಲಕಮುಖಿ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ..!

ರಸ್ತೆ ಅಭಿವೃದ್ಧಿಯ ವಾಸ್ತವ ಚಿತ್ರಣ ಬಹಿರಂಗವಾಗಿದೆ. ಸುಮಾರು ಐದು ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಕೆಲವೆಡೆ ಹಳೆಯ ಕಲ್ಲಿನ ರಸ್ತೆ ಹೊರಚಾಚಿದ್ದು, ಇನ್ನೂ ಕೆಲವೆಡೆ ಡಾಂಬರು ಸಂಪೂರ್ಣ ಕಿತ್ತುಹೋಗಿದೆ. ಅನೇಕ ಭಾಗಗಳಲ್ಲಿ ರಸ್ತೆ ಮಣ್ಣಿನ ಹಾದಿಯಾಗಿ ಬದಲಾಗಿದ್ದು, ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳಿನ ಮೋಡ—ಇದೇ ಇಲ್ಲಿನ ಜನರ ನಿತ್ಯದ ಅನುಭವ.

ಚಿತ್ರಗಳು ಹೇಳುತ್ತಿವೆ ಕಹಿ ಸತ್ಯ…! : ಸ್ಥಳದಲ್ಲಿ ಸೆರೆಹಿಡಿದ ಚಿತ್ರಗಳು ರಸ್ತೆಯ ದುಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.

1) ಒಂದು ಭಾಗದಲ್ಲಿ ಹಳೆಯ ಕಲ್ಲಿನ ರಸ್ತೆ ಸಂಪೂರ್ಣ ಹೊರಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ರಸ್ತೆಯ ಬದಿಯ ಮಣ್ಣಿನಲ್ಲೇ ಸಂಚರಿಸುವ ಪರಿಸ್ಥಿತಿ ಕಂಡುಬಂತು.

2) ಇನ್ನೊಂದು ಭಾಗದಲ್ಲಿ ರಸ್ತೆಯ ಮೇಲ್ಭಾಗ ಸಂಪೂರ್ಣ ಕೊಚ್ಚಿಹೋಗಿ, ವಾಹನಗಳು ತೀವ್ರ ವೇಗದಲ್ಲಿ ಸಾಗುವುದು ಅಸಾಧ್ಯವಾಗಿದೆ.

3) ಹಲವೆಡೆ ಡಾಂಬರು ಕಿತ್ತುಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಅಪಘಾತದ ಭೀತಿ ಹೆಚ್ಚಿಸಿದೆ.

4) ರಸ್ತೆ ಇಕ್ಕಟ್ಟಾಗಿರುವುದರಿಂದ ಎದುರುಬರುವ ಎರಡು ವಾಹನಗಳು ಸುಲಭವಾಗಿ ದಾಟಲು ಸಾಧ್ಯವಾಗುತ್ತಿಲ್ಲ.

ರೈತರ ಜೀವನಾಡಿಯೇ ಈ ರಸ್ತೆ..!

ಈ ರಸ್ತೆ ಕೇವಲ ಎರಡು ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಲ್ಲ. ಕುದುರಿಮೋತಿ–ಚಿಲಕಮುಖಿ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರಿಗೆ ತಮ್ಮ ಜಮೀನುಗಳನ್ನು ತಲುಪುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಕೃಷಿ ಯಂತ್ರೋಪಕರಣಗಳು, ಟ್ರ್ಯಾಕ್ಟರ್‌ಗಳು ಹಾಗೂ ಬೆಳೆ ಸಾಗಿಸುವ ವಾಹನಗಳು ಈ ರಸ್ತೆಯಲ್ಲೇ ಸಂಚರಿಸಬೇಕಿದೆ. ಆದರೆ ರಸ್ತೆ ಹಾಳಾಗಿರುವುದರಿಂದ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚು ಸಮಯ ಹಾಗೂ ಹೆಚ್ಚುವರಿ ಸಾರಿಗೆ ವೆಚ್ಚ ಭರಿಸಬೇಕಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮಳೆಗಾಲದಲ್ಲಿ ಮತ್ತಷ್ಟು ದುಸ್ಥಿತಿ…!

ಈಗಾಗಲೇ ರಸ್ತೆ ಹಾಳಾಗಿರುವುದರಿಂದ ಮಳೆಗಾಲ ಆರಂಭವಾಗಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕಾಣದಂತಾಗುತ್ತದೆ. ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಘಟನೆಗಳು ಸಾಮಾನ್ಯವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತುರ್ತು ಸೇವೆಗಳಿಗೂ ಅಡ್ಡಿಯಾಗಿರುವ ರಸ್ತೆ..!

ಗ್ರಾಮಸ್ಥರ ಪ್ರಕಾರ, ಅನಾರೋಗ್ಯ ಅಥವಾ ಅಪಘಾತದ ಸಂದರ್ಭಗಳಲ್ಲಿ ಆಂಬುಲೆನ್ಸ್‌ಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲ. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೂ ತೊಂದರೆ ಎದುರಾಗುತ್ತಿದೆ. ತುರ್ತು ವೈದ್ಯಕೀಯ ಸೇವೆಗೆ ರಸ್ತೆ ಅಡ್ಡಿಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಮಾರ್ಗವನ್ನು ಬಳಸಲಾಗುತ್ತದೆ. ಅದೇ ಅದು 5 ಕಿಲೋಮೀಟರ್ ಹೆಚ್ಚು ಪ್ರಯಾಣಿಸುವ ಪ್ರಸಂಗ ಎದುರಾಗುತ್ತದೆ.

ಅಭಿವೃದ್ಧಿಯ ಲೆಕ್ಕದಲ್ಲಿ ಈ ರಸ್ತೆ ಇಲ್ಲವೇ?

ಕ್ಷೇತ್ರದಲ್ಲಿ ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ಗಡಿ ಭಾಗದ ಈ ಸಂಪರ್ಕ ರಸ್ತೆ ಮಾತ್ರ ಹಲವು ವರ್ಷಗಳಿಂದ ಹಾಗೆಯೇ ಉಳಿದಿರುವುದು ಗ್ರಾಮಸ್ಥರಲ್ಲಿ ಪ್ರಶ್ನೆ ಹುಟ್ಟಿಸಿದೆ.

ಸ್ಥಳೀಯರ ಪ್ರಕಾರ, ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಅಭಿವೃದ್ಧಿಯ ಹೆಗ್ಗಳಿಕೆ ಹೇಳಿಕೊಳ್ಳುವ ಕ್ಷೇತ್ರದಲ್ಲಿ ಈ ರಸ್ತೆಯೂ ಅಭಿವೃದ್ಧಿ ಪಟ್ಟಿಗೆ ಸೇರುತ್ತದೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಕೇಳಿಬರುತ್ತಿದೆ.

ಸ್ಥಳೀಯರ ಒಕ್ಕೊರಲಿನ ಆಗ್ರಹ..!

ಕುದುರಿಮೋತಿ–ಚಿಲಕಮುಖಿ ಸಂಪರ್ಕ ರಸ್ತೆಯನ್ನು ತಕ್ಷಣ ತಾಂತ್ರಿಕವಾಗಿ ಪರಿಶೀಲಿಸಿ, ಸಂಪೂರ್ಣ ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ದಶಕಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿರುವ ರೈತರು ಹಾಗೂ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪರಿಶೀಲನೆಯ ವೇಳೆ ಕಂಡುಬಂದ ಪ್ರಮುಖ ಅಂಶಗಳು

1) ಸುಮಾರು 5 ಕಿ.ಮೀ. ರಸ್ತೆ ತೀವ್ರ ಹದಗೆಟ್ಟಿದೆ.

2) ಹಳೆಯ ಕಲ್ಲಿನ ರಸ್ತೆ ಮೇಲ್ಮೈ ಸಂಪೂರ್ಣ ಹೊರಬಿದ್ದಿದೆ.

3) ಡಾಂಬರು ಕಿತ್ತುಹೋಗಿ ಅನೇಕ ಕಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ.

4) ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರ ಅಪಾಯಕಾರಿಯಾಗಿದೆ.

5) ಬೆಳೆ ಸಾಗಾಣಿಕೆ ಹಾಗೂ ತುರ್ತು ವೈದ್ಯಕೀಯ ಸೇವೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.

6) ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ.

 

Prajavikshane

Chandru R Bhanapaur

Leave a Reply

error: Content is protected !!