Post Views: 35
LOCAL NEWS : ಯಲಬುರ್ಗಾ | ರೈತ ಬಾಂಧವರೇ ಗಮನಿಸಿ: ಬೆಳೆ ವಿಮೆ ಪಾವತಿಗೆ ಕೃಷಿ ಇಲಾಖೆಯ ಮಹತ್ವದ ಸೂಚನೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಯಲಬುರ್ಗಾ, ಜುಲೈ 7: ಪ್ರಸಕ್ತ ಸಾಲಿನ ಬೆಳೆ ವಿಮೆ ಯೋಜನೆಯಡಿ ರೈತರು ಸಕಾಲದಲ್ಲಿ ವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ತುಂಬಳ್ ಅವರು ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ್ದು, ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಅನುಸರಿಸಬೇಕಾದ ಪ್ರತ್ಯೇಕ ವಿಧಾನಗಳನ್ನು ಸ್ಪಷ್ಟಪಡಿಸಿದ್ದಾರೆ.
ಕೃಷಿ ಸಾಲ ಪಡೆದಿರುವ ರೈತರು ಕಡ್ಡಾಯವಾಗಿ ತಾವು ಸಾಲ ಪಡೆದಿರುವ ಬ್ಯಾಂಕ್ ಶಾಖೆ ಅಥವಾ ಸಹಕಾರ ಸಂಘಗಳಲ್ಲಿಯೇ ಬೆಳೆ ವಿಮೆ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇದರಿಂದ ರೈತರ ಅರ್ಜಿಗಳು ಸರಿಯಾಗಿ ದಾಖಲಾಗಿ ಯೋಜನೆಯ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆಯದ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳು (ಸಿ.ಎಸ್.ಸಿ.) ಅಥವಾ ಕೃಷಿ ಇಲಾಖೆ ಸೂಚಿಸಿರುವ ಅಧಿಕೃತ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಬಹುದಾಗಿದೆ. ಯಾವುದೇ ಅನಧಿಕೃತ ಕೇಂದ್ರಗಳಲ್ಲಿ ಹಣ ಪಾವತಿಸದಂತೆ ರೈತರಿಗೆ ಎಚ್ಚರಿಕೆ ನೀಡಲಾಗಿದೆ.
ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಿದೆ. ಆದ್ದರಿಂದ ಅರ್ಹ ರೈತರೆಲ್ಲರೂ ನಿಗದಿತ ಅವಧಿಯೊಳಗೆ ವಿಮೆ ಮಾಡಿಸಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಯಾವುದೇ ಗೊಂದಲಗಳಿದ್ದಲ್ಲಿ ಸಂಬಂಧಿತ ಕೃಷಿ ಇಲಾಖೆ ಕಚೇರಿ, ಬ್ಯಾಂಕ್ ಶಾಖೆ ಅಥವಾ ಸಮೀಪದ ಸಿ.ಎಸ್.ಸಿ. ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಬೆಳೆ ವಿಮೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ರೈತರಿಗೆ ಕರೆ ನೀಡಿದ್ದಾರೆ.