PV NEWS EXCLUSIVE : ತಾಲೂಕಿನ ಬಹುನಿರೀಕ್ಷಿತ “ಪ್ರಜಾಸೌಧ” ನಿರ್ಮಾಣದ ಕಾಮಗಾರಿ ಚುರುಕು..!
PV NEWS ಕನ್ನಡ 24×7:
ಕುಕನೂರು, ಜುಲೈ, (ಪಿವಿ ನ್ಯೂಸ್ ಕನ್ನಡ) : ತಾಲೂಕಿನ ಬಹುನಿರೀಕ್ಷಿತ ಪ್ರಜಾಸೌಧ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು, ಸರ್ವೇ ನಂ. 78ರ ಸುಮಾರು 16 ಎಕರೆ ಜಾಗದಲ್ಲಿ ಭೂ ಸಮತಟ್ಟು ಸೇರಿದಂತೆ ಆರಂಭಿಕ ಕಾಮಗಾರಿಗಳು ಭರದಿಂದ ಸಾಗುತ್ತಿವೆ.
ಆದರೆ, ಇದೇ ಜಾಗಕ್ಕೆ ಸಂಬಂಧಿಸಿದಂತೆ ಗುದ್ನೇಪ್ಪನ ಮಠದ ಭೂ ಹಕ್ಕಿನ ಕುರಿತು ಹೈಕೋರ್ಟ್ನಲ್ಲಿ ಪ್ರಕರಣ ಬಾಕಿಯಿರುವ ಹಿನ್ನೆಲೆಯಲ್ಲಿ, ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳಬಾರದು ಎಂದು ಮಠದ ಸೇವಾದಾರರು ಹಾಗೂ ಭಕ್ತರು ಆಗ್ರಹಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ಗೆ ಮತ್ತೊಂದು ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಮತ್ತೊಂದೆಡೆ, ತಾಲೂಕಿಗೆ ಪ್ರತ್ಯೇಕ ಆಡಳಿತಾತ್ಮಕ ಸಂಕೀರ್ಣದ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸುಮಾರು 8 ಕೋಟಿ ರೂ. ಗಳ ವೆಚ್ಚದಲ್ಲಿ ‘ಪ್ರಜಾಸೌಧ”ನಿರ್ಮಾಣವಾಗುತ್ತಿದ್ದು, ಇದರಲ್ಲಿ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದ್ದು, ಸಾರ್ವಜನಿಕ ಸೇವೆಗಳೂ ಇನ್ನಷ್ಟು ಸುಗಮವಾಗಲಿವೆ ಎನ್ನಲಾಗುತ್ತಿದೆ.
ಈ ನಡುವೆ, ಹೈಕೋರ್ಟ್ನಲ್ಲಿ ಬಾಕಿ ಇರುವ ಅರ್ಜಿಯ ವಿಚಾರಣೆ ಹಾಗೂ ಮುಂದಿನ ನ್ಯಾಯಾಂಗ ಆದೇಶಗಳ ಮೇಲೆ ಯೋಜನೆಯ ಮುಂದಿನ ಬೆಳವಣಿಗೆ ಅವಲಂಬಿತವಾಗಿದ್ದು, ಆಡಳಿತಾತ್ಮಕ ಅಭಿವೃದ್ಧಿ ಮತ್ತು ಮಠದ ಭೂ ಹಕ್ಕಿನ ವಿಚಾರ ಎರಡೂ ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ.