PV NEWS : 26 ವರ್ಷಗಳ ಸೇನಾ ಸೇವೆ ಬಳಿಕ ಸುಬೇದಾರ್ ಯಲ್ಲಪ್ಪ ಗುಡಗೇರಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ
PV NEWS ಕನ್ನಡ 24×7 :
ಕುಕನೂರು, ಆ. 2: ಭಾರತೀಯ ಸೇನೆಯಲ್ಲಿ 26 ವರ್ಷಗಳ ಕಾಲ ಸುಬೇದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಗೌರವಯುತವಾಗಿ ನಿವೃತ್ತರಾದ ತಾಲೂಕಿನ ಹೆಮ್ಮೆಯ ಯೋಧ ಯಲ್ಲಪ್ಪ ನಾಗಪ್ಪ ಗುಡಗೇರಿ ಅವರಿಗೆ ಸ್ವಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿ ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಿದರು.
ಕೊಪ್ಪಳ ನಗರದಿಂದ ಕುಕನೂರು, ಮಂಡಲಗಿರಿ, ಇಟಗಿ ಹಾಗೂ ಮನ್ನಾಪುರ, ಮನ್ನಾಪುರ ತಾಂಡದವರೆಗೆ ಪ್ರಮುಖ ಬೀದಿಗಳಲ್ಲಿ ನಡೆದ ಅದ್ದೂರಿ ಮೆರವಣಿಗೆಯಲ್ಲಿ ನೂರಾರು ಗ್ರಾಮಸ್ಥರು, ಯುವಕರು, ಗಣ್ಯರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಪುಷ್ಪಾರ್ಚನೆ, ಹೂಮಾಲೆ ಹಾಕಿ ವೀರಯೋಧರನ್ನು ಅಭಿನಂದಿಸಿದರು. ದೇಶದ ಗಡಿಯನ್ನು 26 ವರ್ಷಗಳ ಕಾಲ ಕಾಪಾಡಿ ತಾಯ್ನಾಡಿಗೆ ಮರಳಿದ ಯೋಧರನ್ನು ಸನ್ಮಾನಿಸುವ ಮೂಲಕ ಗ್ರಾಮಸ್ಥರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಬುಡ್ಡೆಸಾಬ ನಾಯಕ ಉದ್ಘಾಟಿಸಿದರು. ಪ್ರವೀಣ ಬಸವರಾಜ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ನೀಲಪ್ಪ ಕಡೆಮನಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಯಲ್ಲಪ್ಪ ಗುಡಗೇರಿ ಅವರ ದೇಶಸೇವೆ ಯುವಜನತೆಗೆ ಆದರ್ಶವಾಗಿದ್ದು, ಅವರ ಶಿಸ್ತು, ಧೈರ್ಯ ಮತ್ತು ರಾಷ್ಟ್ರಭಕ್ತಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಯಲ್ಲಪ್ಪ ನಾಗಪ್ಪ ಗುಡಗೇರಿ ಅವರನ್ನು ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅವರ ನಿವೃತ್ತ ಜೀವನ ಆರೋಗ್ಯ, ನೆಮ್ಮದಿ, ಸಂತೋಷ ಮತ್ತು ಗೌರವದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶರಣಪ್ಪ ಮಾಸ್ತಾರ ವೀರಾಪೂರ, ವೀರಪ್ಪ ಜಾಗರಿ, ನಾಗರಾಜ ಚಿಕ್ಕೇನಕೊಪ್ಪ, ನಾಗರಾಜ ವೆಂಕಟಾಪೂರ, ಸಂಗಪ್ಪ ಗೊಂಡಿ, ಶಿವಾನಂದಪ್ಪ ಜೀವಣ್ಣವರ, ಕನಕರಾಯ ತಳವಾರ, ಈರಣ್ಣ ಸಜ್ಜನ, ಮಲ್ಲಪ್ಪ ಕೆರಳ್ಳಿ, ದೇವೇಂದ್ರಪ್ಪ ವೆಂಕಟಾಪೂರ, ಶರಣಪ್ಪ ಹೆಚ್. ಹಳ್ಳಿ ಹಾಗೂ ಅಂಗಪ್ಪ ಹಡಪದ ಉಪಸ್ಥಿತರಿದ್ದು, ನಿವೃತ್ತ ಸುಬೇದಾರ್ ಯಲ್ಲಪ್ಪ ನಾಗಪ್ಪ ಗುಡಗೇರಿ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ರವೀಂದ್ರ ರಾಜೂರು ನಿರೂಪಿಸಿದರು. ಕೊನೆಯಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು, “ಜೈ ಹಿಂದ್” ಮತ್ತು “ವಂದೇ ಮಾತರಂ” ಘೋಷಣೆಗಳೊಂದಿಗೆ ವೀರಯೋಧರಿಗೆ ಗೌರವ ಸಲ್ಲಿಸಿದರು.