BREAKING : ‘ಜಿಲ್ಲಾ ಕೋಟಾ’ ಜೊತೆಗೆ ‘ಪೇಮೆಂಟ್ ಕೋಟಾ’ವೂ ಇದೆಯೇ? : ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ, ಕೊಪ್ಪಳ ರಾಜಕೀಯದಲ್ಲಿ ಹೊಸ ಚರ್ಚೆ!

PV NEWS ಕನ್ನಡ 24×7 | ಕುಷ್ಟಗಿ | ಆ. 3
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕೊಪ್ಪಳ ಜಿಲ್ಲೆಯ ರಾಜಕೀಯ ವಲಯದಲ್ಲಿ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ. ಕೊಪ್ಪಳದಂತಹ ಸಣ್ಣ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ದೊರೆತಿರುವ ಹಿಂದೆ ಹಣಕಾಸು ವ್ಯವಹಾರಗಳ ಪ್ರಭಾವವಿದೆ ಎಂದು ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಹಣದ ಆಧಾರದ ಮೇಲೆ ಸಚಿವ ಸ್ಥಾನಗಳನ್ನು ನೀಡುವುದಿಲ್ಲ ಎಂದು ಹೇಳಲಾಗಿದ್ದರೂ, ಎಲ್ಲ ರೀತಿಯ ಒಪ್ಪಂದಗಳು ಪೂರ್ಣಗೊಂಡ ನಂತರವೇ ಸಂಪುಟ ವಿಸ್ತರಣೆ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಹಿಂದೆ ಸಚಿವ ಸ್ಥಾನಕ್ಕಾಗಿ ₹100 ರಿಂದ ₹150 ಕೋಟಿ ವರೆಗೆ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ತಾವು ಮಾಡಿದ್ದ ಆರೋಪವನ್ನು ಅವರು ಪುನರುಚ್ಚರಿಸಿ, ತಮ್ಮ ಹೇಳಿಕೆಗೆ ಈಗಲೂ ಬದ್ಧರಾಗಿರುವುದಾಗಿ ತಿಳಿಸಿದರು.

‘ಜಿಲ್ಲಾ ಕೋಟಾ’ ಮತ್ತು ‘ಪೇಮೆಂಟ್ ಕೋಟಾ’ ಕುರಿತು ಪ್ರಸ್ತಾಪ
ಕೊಪ್ಪಳ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ದೊರೆತಿರುವುದನ್ನು ಸ್ವಾಗತಿಸಿದರೂ, ಅದರಲ್ಲಿ ಒಂದು ಸ್ಥಾನ ಜಿಲ್ಲೆಯ ಪ್ರತಿನಿಧಿತ್ವದ ಆಧಾರದ ಮೇಲೆ ದೊರೆತಿದ್ದರೆ, ಮತ್ತೊಂದು ಸ್ಥಾನ ‘ಪೇಮೆಂಟ್ ಕೋಟಾ’ ಮೂಲಕ ಲಭಿಸಿದೆ ಎಂಬ ಆರೋಪವನ್ನು ದೊಡ್ಡನಗೌಡ ಪಾಟೀಲ್ ಮುಂದಿಟ್ಟರು. ಹಣದ ಪ್ರಭಾವದಿಂದ ಸಚಿವ ಸ್ಥಾನ ಪಡೆದವರು ಯಾರು ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಅವರು ಹೇಳಿದರು.
