ಬೆಂಗಳೂರು : ರಾಜ್ಯ ರಾಜಧಾನಿಯ ಹೆಸರನ್ನೇ ಬದಲಾಯಿಸಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಸಿಲಿಕಾನ್ ಸಿಟಿ” ಕೇಂದ್ರ ಬಿಂದುವಾಗಿರುವ “ಎಲೆಕ್ಟ್ರಾನಿಕ್ ಸಿಟಿ”ಯ ಹೆಸರನ್ನು ಮರು ನಾಮಕರಣಗೊಳಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇನ್ಮುಂದೆ ಎಲೆಕ್ಟ್ರಾನಿಕ್ ಸಿಟಿ ಹೆಸರು ಮರು ನಾಮಕರಣಗೊಳಿಸಿ “ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ” ಎಂದು ಹೆಸರಿಸಲಾಗಿದೆ ಎಂದು ಅವರು ಘೋಷಣೆ ಮಾಡಿದರು.
ಇಂದು ಈ ಕುರಿತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿ, ‘ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೆಸರನ್ನು ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ” ಎಂದು ಮರು ನಾಮಕರಣಗೊಳಿಸುತ್ತಿರುವುದಾಗಿ ಹೇಳಿದರು.
“ಸಮಾಜದಲ್ಲಿ ಮೇಲು ಕೀಳು ಇರಬಾರದು. ಬಡವ ಬಲ್ಲಿದ ಇರಬಾರದು. ಜಾತಿ ವ್ಯವಸ್ಥೆ ಇರಬಾರದು, ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಬದುಕಬೇಕು ಎಂಬುವುದೇ ಬಸವಾದಿ ಶರಣರ ಕನಸು ಕಂಡಂತೆ, ಇದೇ ತತ್ವದ ಆಧಾರದ ಮೇಲೆ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ಸಹ ಈ ತತ್ವ ಸಿದ್ದಾಂತಗಳ ಆಧಾರದಲ್ಲಿ ಆಡಳಿತ ನಡೆಸಿ, ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳಷ್ಟು ಕಾಳಜಿ ಹೊಂದಿದ್ದರು ಎಂದರು.
“ಮೀಸಲಾತಿ, ಭೂಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತಪದ್ಧತಿ ನಿರ್ಮೂಲನೆ ಮುಂತಾದ ಕ್ರಾಂತಿಕಾರಕ ಕಾಯ್ದೆ, ಕಾನೂನುಗಳ ಮೂಲಕ ಸಮಾಜದ ಶೋಷಿತ, ಅವಕಾಶ ವಂಚಿತ, ಬಡಜನರ ಬಾಳಿಗೆ ಬೆಳಕು ಹರಿಸಿದ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರ ಋಣದಲ್ಲಿ ನಾನೂ ಸೇರಿದಂತೆ ಈ ನಾಡಿನ ಕೋಟ್ಯಂತರ ಜನರಿದ್ದೇವೆ” ಎಂದು ತಿಳಿಸಿದರು.