ಕುಕನೂರು : ಬಿಜೆಪಿ ಪಕ್ಷದ ಟಿಕೆಟ್ ಅಧಿಕೃತ ಘೋಷಣೆಗೂ ಮುನ್ನವೇ ಸಚಿವರು ಕಾರ್ಯಕರ್ತರನ್ನು ನಾಮಿನೇಷನ್ ಗೆ ಆಹ್ವಾನಿಸುವ ಮೂಲಕ ನೆರೆದಿದ್ದ ಕಾರ್ಯಕರ್ತರನ್ನು ಅಚ್ಚರಿಗೊಳಿಸಿದ ಪ್ರಸಂಗ ನಡೆಯಿತು.
ಯಲಬುರ್ಗಾ ಶಾಸಕ,ಸಚಿವ ಹಾಲಪ್ಪ ಆಚಾರ್ ಅವರು ಬಿಜೆಪಿ ಚುನಾವಣೆ ಪ್ರಚಾರ ನಿಮಿತ್ತ ತಾಲೂಕಿನ ಹಿರೇ ಬೀಡನಾಳ್ ಗ್ರಾಮದ ವೆಂಕರಡ್ಡಿ ಅವರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಘಟನಾತ್ಮಕ ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ನಾಮಿನೆಷನ್ ದಿನ ಎಲ್ಲರೂ ಬರಬೇಕು ಎಂದು ಹೇಳುವ ಮೂಲಕ ಯಲಬುರ್ಗಾ ಬಿಜೆಪಿ ಟಿಕೆಟ್ ತಮಗೆ ಎಂಬುದನ್ನು ಅಧಿಕೃತಗೊಳಿಸಿದರು.
ಯಲಬುರ್ಗಾ ಬಿಜೆಪಿ ಟಿಕೆಟ್ ಜಿದ್ದಾ ಜಿದ್ದಿನ ನಡುವೆ ಸಚಿವರ ಈ ಹೇಳಿಕೆಯಿಂದ ಅಂತಿಮವಾಗಿ ಬಿಜೆಪಿ ಟಿಕೆಟ್ ಹಾಲಪ್ಪ ಆಚಾರ್ ಅವರಿಗೆ ಸಿಗಲಿದೆ ಎಂಬುದು ಗೊತ್ತಾಗಿದೆ.
ಮಾಜಿ ಶಾಸಕರ ಪುತ್ರ ನವೀನ್ ಕುಮಾರ್ ಗುಳಗಣ್ಣನವರ್ ಕೂಡಾ ಬಿಜೆಪಿ ಟಿಕೆಟ್ ಗೆ ತೀವ್ರ ಪೈಪೋಟಿ ಒಡ್ಡಿದ್ದರು. ಹೀಗಾಗಿ ಸಚಿವರು ಇಂದಿನ ಕಾರ್ಯಕರ್ತರ ಸಭೆಯಲ್ಲಿ ನಾಮಪತ್ರ ಸಲ್ಲಿಸುವ ದಿನ ಎಲ್ಲರೂ ಬನ್ನಿ ಎಂದು ಅಹ್ವಾನ ಕೊಟ್ಟಿದ್ದು ಹಾಲಪ್ಪ ಆಚಾರ್ ಅವರೇ ಬಿಜೆಪಿ ಅಭ್ಯರ್ಥಿ ಎಂದು ಕನ್ಫರ್ಮ್ ಆಗಿದೆ.
ಸಭೆಯಲ್ಲಿ ಎಂ ಎಲ್ ಸಿ ಹೇಮಲತಾ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:- ಈರಯ್ಯ ಕುರ್ತಕೋಟಿ