ಪ್ರಜಾ ವೀಕ್ಷಣೆ ಸುದ್ದಿ :-
BIG NEWS : ಪತ್ರಕರ್ತನಿಗೆ ಬೆದರಿಕೆ ಪ್ರಕರಣ : ಶಾಸಕ ರಾಯರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು..!

ಕೊಪ್ಪಳ : ಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಸಿಎಂ ಅವರ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿಯವರನ್ನು ಸಂಪರ್ಕಿಸಿದಾದ ಕೊಪ್ಪಳದ ಪತ್ರಕರ್ತ ಬಸವರಾಜ ಕರುಗಲ್ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್ನ ಸದಸ್ಯರು ಸಭೆ ನಡೆಸಿ, ರಾಯರಡ್ಡಿಯವರ ಮುಂದುವರಿದ ಈ ರೀತಿಯ ವರ್ತನೆಯನ್ನು ಖಂಡಿಸಿದರು.
ಅವರನ್ನು ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಹಿರಿಯ ರಾಜಕಾರಣಿ ಬಸವರಾಜ ರಾಯರಡ್ಡಿಯವರು ಪತ್ರಕರ್ತರೊಂದಿಗೆ ನಿರಂತರವಾಗಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸುದ್ದಿ ವಿಷಯವಾಗಿ ಪತ್ರಕರ್ತರು ಕರೆ ಮಾಡಿದಾಗ ಸಂಪಾದಕರಿಗೆ ದೂರು ನೀಡುವೆ, ಕೆಲಸದಿಂದ ತೆಗಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರಾಗಿಯೇ ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವೈರಲ್ ಆದಾಗ ಅದನ್ನು ಸಮರ್ಥಿಸುವ ಭರದಲ್ಲಿ ಪತ್ರಕರ್ತರು ಸುದ್ದಿ ತಿರುಚುತ್ತಾರೆ ಎಂದೆಲ್ಲ ಕೇವಲವಾಗಿ ನಿಂದಿಸುತ್ತಾರೆ.
ಕೊಪ್ಪಳ ಪತ್ರಕರ್ತರು ಯಾರೂ ಅವರ ಬಗ್ಗೆ ದ್ವೇಷ ಭಾವನೆ ಹೊಂದಿಲ್ಲ. ಸುದ್ದಿಗಾಗಿ ಅವರನ್ನು ಸಂಪರ್ಕಿಸುವ ಬಹುತೇಕ ಪತ್ರಕರ್ತರಿಗೆ ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ದರ್ಪದಿಂದ ಮಾತನಾಡುತ್ತಾರೆ. ಇದು ಹಲವಾರು ಬಾರಿ ಪುನರಾವರ್ತನೆ ಆಗುತ್ತಿದೆ. ಈ ಬಗ್ಗೆ ನಾವು ಸಾಕಷ್ಟು ಬಾರಿ ಅವರಿಗೆ ತಿಳಿಸಿದರೂ ಬದಲಾಯಿಸಿಕೊಳ್ಳುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
