ಪ್ರಜಾ ವೀಕ್ಷಣೆ ಸುದ್ದಿ:-
LOCAL NEWS : ಎ.ಐ. ತಂತ್ರಜ್ಞಾನ ಬಳಕೆಯಲ್ಲಿ ಯುವಜನತೆ ಎಚ್ಚರವಹಿಸಿ : ಪಿಎಸ್ಐ ಗುರುರಾಜ್ ಸಲಹೆ..!
ಕುಕನೂರು : ‘ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಸಲ್ಪಡುತ್ತಿರುವ ಎ. ಐ ತಂತ್ರಜ್ಞಾನ ಬಳಕೆಯ ಮತ್ತು ಅದರ ದುಸ್ಪರಿಣಾಮಗಳ ಬಗ್ಗೆ ಯುವಜನತೆ ಹಾಗೂ ಮಹಿಳೆಯರು ಎಚ್ಚರವಹಿಸಬೇಕಿದೆ’ ಎಂದು ಕುಕನೂರು ಠಾಣೆಯ ಪಿಎಸ್ಐ ಗುರುರಾಜ್ ಟಿ ಸಲಹೆ ನೀಡಿದರು.
ತಾಲೂಕಿನ ತಿಪ್ಪರಸನಾಳದಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿನಲ್ಲಿ ಕುಕನೂರು ಕಾರ್ಯನಿರತ ಪತ್ರಕರ್ತ ದ್ವನಿ ಸಂಘದಿಂದ ಆಯೋಜನೆ ಮಾಡಲಾಗಿದ್ದ “ಕನ್ನಡ ಪತ್ರಿಕಾ ದಿನಾಚರಣೆ”ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸೇರಿದಂತೆ ಹೆಚ್ಚು ಬಳಸಲ್ಪಡುವ ಕೃತಕ ಬುದ್ದಿಮತ್ತೆಯ ಎ ಐ ತಂತ್ರಜ್ಞಾನದಿಂದ ಕೆಲವೊಂದು ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಎ ಐ ತಂತ್ರಜ್ಞಾನ ದುರ್ಬಳಕೆ ಉಂಟಾಗುತ್ತಿದೆ. ಹೀಗಾಗಿ ಯುವತಿಯರು ತಮ್ಮ, ಫೋಟೋ, ಮೊಬೈಲ್ ಸಂಖ್ಯೆ ಸೇರಿದಂತೆ ಇತರ ವಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಾರ್ವಜನಿವಾಗಿ ಹಂಚಿಕೊಳ್ಳುವಾಗ ಎಚ್ಚರ ವಹಿಸಬೇಕು ಎಂದು ಪಿಎಸ್ಐ ಗುರುರಾಜ್ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಮಾತನಾಡಿ, ‘ಸ್ವಾಸ್ತ್ಯ ಸಮಾಜ ಕಟ್ಟುವಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ದೊಡ್ಡದು. ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ರಂಗವು ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯುವತಿಯರು ಓದುವ ಅಭಿರುಚಿ ಬೆಳಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಜ್ಞಾನ ಸಂಪಾದಿಸಿ ದೇಶ ಸೇವೆಯ ಕಾರ್ಯಕ್ಕೆ ಅಣಿಗೊಳ್ಳಬೇಕು’ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಪಾಟೀಲ್ ಮಾತನಾಡಿ, ‘ಶಾಸಕಾಂಗ, ಕಾರ್ಯಾoಗ, ನ್ಯಾಯಾಂಗ ಜೊತೆಗೆ ಪತ್ರಿಕಾoಗ ಇವು ನಾಲ್ಕು ಪ್ರಜಾಪ್ರಭುತ್ವದ ಆಧಾರ ಸ್ಥoಭಗಳು. ಮುದ್ರಣ ಮತ್ತು ದೃಶ್ಯ ಮಾಧ್ಯಮ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸಮಾಜದ ನಿರ್ಮಾದಲ್ಲಿ ತಮ್ಮದೇ ಆದ ಜವಾಬ್ದಾರಿ ನಿರ್ವಹಿಸುತ್ತಿವೆ. ಪತ್ರಿಕೆಗಳು ಮತ್ತು ಪತ್ರಕರ್ತರು ದಿನದ 24 ತಾಸು ಕಾರ್ಯಪ್ರವೃತ್ತರಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನರಸಿಂಹ ಗುಂಜನಹಳ್ಳಿ ಇವರಿಂದ ಪತ್ರಿಕೋದ್ಯಮದಲ್ಲಿ ಮಹಿಳೆಯರ ಪಾತ್ರ ಮತ್ತು ಅವಕಾಶಗಳು ಕುರಿತು ಉಪನ್ಯಾಸ ನಡೆಯಿತು.

ವಿದ್ಯಾರ್ಥಿಗಳಿಗೆ ಲೇಖನಿ ನೀಡುವ ಮೂಲಕ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಈ ವೇಳೆಯಲ್ಲಿ ಹಠಾತ್ ಹೃದಯಾಘತದಿಂದ ಮೃತಹೊಂದಿದ ವರದಿಗಾರರಾದ ದಿವಂಗತ ಶರಣಯ್ಯ ತೋಂಟದಾರ್ಯಮಠ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮಾಡಲಾಯಿತು. ಈ ಮೂಲಕ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾoಶುಪಾಲರಾದ ಕೃಷ್ಣಮೂರ್ತಿ ಗಡಾರಿ, ಕಾ.ನೀ. ಪ. ದ್ವನಿ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಮಠದ, ತಾಲೂಕು ಅಧ್ಯಕ್ಷ ಚಂದ್ರು ಭಾನಾಪೂರ್, ಮಹೇಶ್ ಕಲ್ಮಠ, ಈರಯ್ಯ ಕುರ್ತಕೋಟಿ, ಭೀಮಾಶಂಕರ್ ಪಾಣೇಗಾಂ, ವಿಶ್ವನಾಥ್ ಪಟ್ಟಣಶೆಟ್ಟಿ, ವೀರಯ್ಯ ಹಿರೇಮಠ, ಮುತ್ತಯ್ಯ ತೋಂಟದಾರ್ಯಮಠ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
