BIG NEWS : ಒಳಮೀಸಲಾತಿ ವರ್ಗೀಕರಣವನ್ನು ಒಪ್ಪಲು ಸಾಧ್ಯವೇ ಇಲ್ಲ : ಸಂಸದ ಗೋವಿಂದ ಕಾರಜೋಳ
ಕೊಪ್ಪಳ : “ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜನಸಂಖ್ಯೆಗೆ ಅನುಗುಣವಾಗಿ, ನ್ಯಾ. ನಾಗಮೋಹನದಾಸ್ ವರದಿಯಂತೆ ಅಥವಾ ಮಾಧುಸ್ವಾಮಿ ಆಯೋಗದ ಶಿಫಾರಸಿನಂತೆ ಒಳಮೀಸಲಾತಿ ವರ್ಗೀಕರಣ ಮಾಡಿಲ್ಲ, ಹೀಗಾಗಿ ಸರ್ಕಾರ ಈಗ ಮಾಡಿರುವ ಒಳಮೀಸಲಾತಿ ವರ್ಗೀಕರಣವನ್ನು ಒಪ್ಪಲು ಸಾಧ್ಯವೇ ಇಲ್ಲ” ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.
ಇಂದು ಮುನಿರಾಬಾದ್ನಲ್ಲಿ ಒಳಮೀಸಲಾತಿಯ ಕುರಿತು ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು, ಈ ವೇಳೆ ಮಾತನಾಡಿದ ಅವರು, ‘ನಾವು ಯಾವುದೇ ಜನಾಂಗದ ವಿರೋಧಿಗಳಲ್ಲ, ಮಾನ್ಯ ಸುಪ್ರೀಂ ಕೋರ್ಟ್ ಹಿಂದುಳಿದವರನ್ನು ಗುರುತಿಸುವಿಕೆಯ ವಿಚಾರದಲ್ಲಿ ಸ್ಪಷ್ಟ ಮಾರ್ಗದರ್ಶನ ನೀಡಿದ್ದರೂ ಸಹ, ಅದನ್ನು ಅನುಸರಿಸಿಲ್ಲ ಎಂಬುದೇ ನಮ್ಮ ಆಕ್ಷೇಪ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರಗಳು 2011ರಿಂದಲೂ ಒಳಮೀಸಲಾತಿ ಪರವಾಗಿಯೇ ಇದ್ದವು. ಆದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸಿಗರು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ, ನ್ಯಾ. ನಾಗಮೋಹನದಾಸ್ ಆಯೋಗ ಬಹಳ ವೈಜ್ಞಾನಿಕವಾಗಿಯೇ ವರದಿ ಸಲ್ಲಿಸಿದ್ದರೂ, ಅದನ್ನು ಒಪ್ಪಲು ಸಿದ್ಧವಿಲ್ಲದ ರಾಜ್ಯ ಸರ್ಕಾರ ಕೇವಲ ಮೂರು ವಿಭಾಗ ಮಾಡಿ ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ ಎಂದರು.
ಸೆ..22ರಿಂದ ನಡೆಯುವ ಜಾತಿಗಣತಿ ಬಹಿಷ್ಕಾರದ ಎಚ್ಚರಿಕೆ ಹಾಕಿದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ
ಕೊಪ್ಪಳ : ‘ಹಿಂದೂ ಜಾತಿಗಳ ಹೆಸರಿನೊಂದಿಗೆ ಸೇರಿಸಲಾದ ಕ್ರಿಶ್ಚಿಯನ್ ಪದವನ್ನು ತಕ್ಷಣ ತೆಗೆದು ಸಮೀಕ್ಷೆಗೆ ಬರಬೇಕು, ಇಲ್ಲವಾದರೆ ಸಮೀಕ್ಷೆಯನ್ನು ಬಹಿಷ್ಕರಿಸಲು ಕರೆ ನೀಡಬೇಕಾಗುತ್ತದೆ’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದರು.
ಇಂದು ತಾಲೂಕಿನ ಮುನಿರಾಬಾದ್ನ ರೇಸಾರ್ಟ್ ಹೋಂಸ್ಟೇ ಒಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ ಸೆ..22ರಿಂದ ಮತ್ತೊಮ್ಮೆ ಜಾತಿಗಣತಿ ನಡೆಯಲಿದೆ, ಹಿಂದುಳಿದ ಆಯೋಗದಿಂದ ಪ್ರ ತಿಯೊಂದು ಜಾತಿಗೂ ಕ್ರಿಶ್ಚಿಯನ್ ಎಂಬ ಹೆಸರು ಸೇರಿಸಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಖುಷಿಪಡಿಸಲು ಮಾಡಿದಂತಹ ತಂತ್ರ ಇದು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಡೇಸುಗೂರು, ಮುಖಂಡ ಹನುಮಂತಪ್ಪ ಬಳ್ಳಾರಿ, ಐಎಎಸ್ ನಿವೃತ್ತ ಅಧಿಕಾರಿಗಳಾದ ಲಕ್ಷ್ಮೀನಾರಾಯಣಸ್ವಾಮಿ, ಅನಿಲ್ ಕುಮಾರ್, ಗಣೇಶ್ ಹೊರತ್ನಾಳ್ ಹಾಗೂ ಇತರರು ಇದ್ದರು.