You are currently viewing ತಾಲೂಕು ಪಂಚಾಯತ್ ಕೊಪ್ಪಳದಿಂದ ಆಕರ್ಷಕವಾಗಿ ನಡೆದ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ

ತಾಲೂಕು ಪಂಚಾಯತ್ ಕೊಪ್ಪಳದಿಂದ ಆಕರ್ಷಕವಾಗಿ ನಡೆದ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ


ಕೊಪ್ಪಳ : ಅಸಂಖ್ಯೆ ಜೀವರಾಶಿಗೆ ಆಶ್ರಯದಾಣವಾದ ನೆಲ ಮತ್ತು
ದೇಶದ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರದ ಮಹತ್ವದ “ನನ್ನ ಮಣ್ಣು, ನನ್ನ ದೇಶ” ಕಾರ್ಯಕ್ರಮವು ಆಗಸ್ಟ್ 17ರಂದು ಅರ್ಥಪೂರ್ಣವಾಗಿ ನೆರವೇರಿತು.

ತಾಲೂಕು ಪಂಚಾಯತ್ ಕೊಪ್ಪಳ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯತಿಗಳು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ನೌಕರರು, ಗ್ರಾಮ ಪಂಚಾಯತಿ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು, ತಾಲೂಕ ಪಂಚಾಯತಿಯ ಎಲ್ಲಾ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಬೇರ್‌ ಪೂಟ್‌ ಟೆಕ್ನಿಷಿಯನ್‌ ಹಾಗೂ ಇನ್ನೀತರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಿದರು.

ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳಿಂದ ತರಲಾಗಿದ್ದ ಮಣ್ಣನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದ ಮಣ್ಣಿನ ಮಡಿಕೆಗಳಿಂದ ತಾಲೂಕು ಕೇಂದ್ರಕ್ಕೆ ತರಲಾಗಿತ್ತು. ಇದೆ ವೇಳೆಯಲ್ಲಿ ‘ನನ್ನ ನೆಲ, ನನ್ನ ದೇಶ’ ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕ್ರಮ ಹಿನ್ನೆಲೆಯಲ್ಲಿ ತಿರಂಗದಿಂದ ವೃತ್ತಾಕಾರವಾಗಿ ನನ್ನ ಮಣ್ಣು, ನನ್ನ ದೇಶ ಸಂದೇಶ, ಭಾರತ ದೇಶದ ನಕಾಶೆಯನ್ನು ಬಿಡಿಸಲಾಗಿತ್ತು.

ಕನ್ನಡ, ಇಂಗ್ಲಿಷ್‌, ಹಿಂದಿ ತ್ರಿಭಾಷೆಯಲ್ಲಿ ಹಾಗೂ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಬರೆದ “ನನ್ನ ಮಣ್ಣು ನನ್ನ ದೇಶ”, “ಮೇರಿ ಮಿಟ್ಟಿ ಮೇರಾ ದೇಶ” ಎನ್ನುವ ಅಕ್ಷರಗಳು ಗಮನ ಸೆಳೆದವು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ನಮ್ಮ ದೇಶವು ಉತ್ತಮ ‌ಪರಿಸರ, ಹವಾಗುಣ ಹೊಂದಿರಲು ಇಲ್ಲಿನ ಮಣ್ಣಿನ ಗುಣ ಮುಖ್ಯವಾಗಿದೆ. ಅನೇಕ ಮಹಾತ್ಮರ ಹೋರಾಟದಿಂದಾಗಿ ಮತ್ತು ತ್ಯಾಗದಿಂದಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆದು ಅಭಿವೃದ್ದಿಯತ್ತ ಸಾಗುತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಪೂರ್ಣ ಗೊಂಡ ಸವಿನೆನಪಿಗಾಗಿ ಪ್ರತಿ ಗ್ರಾಮ ಪಂಚಾಯತಿಯಿಂದ ಮಣ್ಣು ಸಂಗ್ರಹಿಸುವ ಮೂಲಕ ಜನರಲ್ಲಿ ಮಣ್ಣು ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು. ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಮುಖ್ಯ ಉದ್ದೇಶ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಅಗಸ್ಟ್-09 ರಿಂದ ಈ ಕಾರ್ಯಕ್ರಮ ಜರುಗಿಸಿ ಜನರಲ್ಲಿ ದೇಶ, ಮಣ್ಣಿನ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರತಿ ಗ್ರಾಮ ಪಂಚಾಯತಿಯ ಒಂದು ಹಿಡಿ ಮಣ್ಣನ್ನು ದೆಹಲಿಗೆ ತಲುಪಿಸಲಾಗುತ್ತದೆ ಎಂದರು.

ಪಂಚಪ್ರಾಣ ಶಪಥ: ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಅವರು ಎಲ್ಲರಿಗೂ ಪಂಚಪ್ರಾಣ ಶಪಥ ಬೋಧಿಸಿದರು. ದೇಶ ಭಕ್ತಿ ಅನಿಸಿಕೆ: ನನ್ನ ಮಣ್ಣು, ನನ್ನ ದೇಶ ಕುರಿತು ಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಹೇಶ್‌ ಎಚ್‌., ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ., ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ದ್ವಿತೀಯ ದರ್ಜೆ ಲೆಕ್ಕಸಹಾಯಕರು,ಕಾರ್ಯದರ್ಶಿಗಳು ಇದ್ದರು.

Prajavikshane

Chandru R Bhanapaur

Leave a Reply

error: Content is protected !!