LOCAL EXPRESS : ‘ಬಾಲಿಶವಾಗಿ ಮಾತನಾಡಿ ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳುತ್ತಿರುವ ರಾಯರೆಡ್ಡಿ!’ : ಮಾಜಿ ಸಚಿವ ಹಾಲಪ್ಪ ಆಚಾರ್
ಕೊಪ್ಪಳ : ‘ದೇಶದ ಭದ್ರತೆಯ ವಿಚಾರದಲ್ಲಿ ಬಾಲಿಶವಾಗಿ ಮಾತನಾಡಿ ತಮ್ಮ ರಾಜಕೀಯ ತೀಟೆಯನ್ನು ತೀರಿಸಕೊಳ್ಳವುದು ಎಷ್ಟರ ಮಟ್ಟಿಗೆ ಸರಿ? ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಶಾಸಕ ಬಸವರಾಜ್ ರಾಯರೆಡ್ಡಿಗೆ ಖಾರವಾಗಿ ಉತ್ತರಿಸಿದರು.
ಇಂದು ಮುನಿರಾಬಾದ್ ನ ರೆಸಾರ್ಟ್ ಒಂದರಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ದೆಹಲಿಯ ಕೆಂಪು ಕೋಟೆಯ ಬಳಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಯರೆಡ್ಡಿ ಅವರ ಹೇಳಿಕೆಯ ಕುರಿತು ಬಿಜೆಪಿ ನಾಯಕರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ? ಇದಕ್ಕೆ ಮಾಜಿ ಸಚಿವ ಹಾಲಪ್ಪ ಆಚಾರ್ ಉತ್ತರಿಸಿದ್ದು ಹೀಗೆ, ‘ಈ ಪ್ರಕರಣಕ್ಕೆ ಕುರಿತು ಅವರ ಹೇಳಿಕೆ ನಾನು ಕೂಡ ಗಮನಿಸಿದ್ದು, ನನ್ನ ಕಡೆ ಯಾವುದೇ ಸಾಕ್ಷಿ ಇಲ್ಲ ಇದನ್ನ ನಾನು ಊಹೆ ಮಾಡ್ಕೊಂಡು ಹೇಳ್ತಿದ್ದೀನಿ ಎಂದು ರಾಯರೆಡ್ಡಿ ಅವರು ಹೇಳಿದ್ದಾರೆ. ಬಸವರಾಜ ರಾಯರೆಡ್ಡಿ ಅವರು ಒಬ್ಬ ಹಿರಿಯ ರಾಜಕಾರಣಿಯಾಗಿ ದೇಶದ ಭದ್ರತೆಯ ವಿಚಾರದಲ್ಲಿ ತುಂಬಾ ಹಗುರವಾಗಿ ಮಾತನಾಡುವುದು ಸರಿಯಲ್ಲ, ಬಿಹಾರ್ ಚುನಾವಣೆಗೂ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಕ್ಕೆ ಯಾವುದೇ ಸಂಬಂಧ ಇಲ್ಲ ಎಂದರು.
ಯುಪಿಎ ಸರ್ಕಾರವಿದ್ದಾಗ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಲವಾರು ಜನ ನಾಗರಿಕರ ಪ್ರಾಣಹಾನಿ ಆಯ್ತು ತಾವೇನು ಮಾಡಿದ್ದೀರಿ ಎಂದು ಅಂದು ಜನ ನೋಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ಆತ್ಮಹುತಿ ಬಾಂಬ್ ದಾಳಿ ಮಾಡಲಾಗಿತ್ತು, ಅಂದು ಇದೇ ಕಾಂಗ್ರೆಸ್ಸಿಗರು ಅವರ ಅಸ್ತಿಯನ್ನು ಹಿಡಿದುಕೊಂಡು ಅಧಿಕಾರಕ್ಕೆ ಬಂದ್ರಲ್ಲ, ಅದನ್ನು ಯಾವ ಲೇಪ ಹಚ್ಚಬೇಕು ಹೇಳಿ? ಎಂದು ಕಾಂಗ್ರೆಸ್ ನವರಿಗೆ ಪ್ರಶ್ನೆ ಹಾಕಿದರು.
‘ಇವುಗಳನ್ನು ಅರಿಯದೆ ಬಾಲಿಶವಾಗಿ ಮಾತನಾಡಿ ತಮ್ಮ ರಾಜಕೀಯ ತೀಟೆಯನ್ನು ತೀರಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ?, ಈ ಕಾಂಗ್ರೆಸ್ಸಿಗರಿಗೆ ದೇಶಾಭಿಮಾನ, ದೇಶದ ಬಗ್ಗೆ ಗೌರವ ಯಾವುದು ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.