ಬೆಂಗಳೂರು : ರಾಜ್ಯ ವಿಧಾನಸಭೆಯ ಚುನಾವಣೆಯ ಮೇ.10ರಂದು ಮತದಾನಕ್ಕೆ, ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಉಮೇಧುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿತ್ತು. ಹಾಗಾಗಿ ಕೊನೆಯ ದಿನವಾದ ಇಂದು 517 ಅಭ್ಯರ್ಥಿಗಳು ನಾಮಪತ್ರವನ್ನು ವಾಪಾಸ್ ಪಡೆದಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ ರಾಜ್ಯದಲ್ಲಿ 2613 ಅಭ್ಯರ್ಥಿಗಳು ಇದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿಯನ್ನು ನೀಡಲಾಗಿದೆ.
ಇನ್ನೂ ಚುನಾವಣೆ ಕಣದಲ್ಲಿ 2427 ಪುರುಷರು ಇದ್ದರೆ, 184 ಮಹಿಳೆಯರು, ಇತರೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಇವರಲ್ಲಿ ಬಿಜೆಪಿಯ 224, ಕಾಂಗ್ರೆಸ್ ಪಕ್ಷದ 223, ಜೆಡಿಎಸ್ ಪಕ್ಷದ 207, ಎಎಪಿ 209, ಬಿಎಸ್ ಪಿ 133, ಸಿಪಿಐ(ಎಂ) 4, ಜೆಡಿಯು 8, ಎನ್ ಪಿಪಿ 2, ಪಕ್ಷೇತರ 918 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅದರ ಜೊತೆಗೆ ನೋಂದಾಯಿತ, ಮಾನ್ಯತೆ ರಹಿತ 685 ಅಭ್ಯರ್ಥಿಗಳು ಸೇರಿದಂತೆ 2613 ಅಭ್ಯರ್ಥಿಗಳು ಅಂತಿಮವಾಗಿ ರಾಜ್ಯ ವಿಧಾನಸಭಾ ಕಣದಲ್ಲಿ ಇದ್ದಾರೆ. ಇವರ ಭವಿಷ್ಯವನ್ನು ಮೇ.10ರಂದು ರಾಜ್ಯದಲ್ಲಿನ ಮತದಾರ ಪ್ರಭುಗಳು ಬರೆಯಲಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಗಾಗಿ 5101 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ಇದರಲ್ಲಿ ಇಂದು 517 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ಅಂತಿಮವಾಗಿ ಕಣದಲ್ಲಿ 2613 ಮಂದಿ ಅಭ್ಯರ್ಥಿಗಳು ಇದ್ದಾರೆ.