LOCAL NEWS : ಚಂಡೂರು ರೈತರ ಭೂಮಿಯಲ್ಲಿ ಅಕ್ರಮ ಸೋಲಾರ್ ಕಾಮಗಾರಿ : ಡಿಎಸ್ಎಸ್ (ಕಾದ್ರೊಳ್ಳಿ ಬಣ) ಆರೋಪ..!!
ಪ್ರಜಾವೀಕ್ಷಣೆ ಸುದ್ದಿ :
ಕುಕನೂರು: ತಾಲೂಕಿನ ಚಂಡೂರು ಗ್ರಾಮದ ರೈತರ ಪಿತ್ರಾರ್ಜಿತ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಅಕ್ರಮವಾಗಿ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ (ಚಂದ್ರಕಾಂತ ಎಸ್. ಕಾದ್ರೊಳ್ಳಿ ಬಣ) ಕಾರ್ಯಕರ್ತರು ಸೋಮವಾರ ಶಿರಸ್ತೇದಾರ ಸುರೇಶ್ ಬಾಲೆ ಹೊಸೂರು ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಈ ವೇಳೆ ಮಾತನಾಡಿದ ಡಿಎಸ್ಎಸ್–ಅಂಬೇಡ್ಕರ್ ಧ್ವನಿ (ಕಾದ್ರೊಳ್ಳಿ ಬಣ) ಜಿಲ್ಲಾ ಅಧ್ಯಕ್ಷ ನಿಂಗಪ್ಪ ಬೆಣಕಲ್, ಗ್ರಾಮದ ದಲಿತ ರೈತ ಗೋವಿಂದಪ್ಪ ತಾಯಿ ಗಾಳೇವ್ವ ಹರಿಜನ ಅವರ ಪಿತ್ರಾರ್ಜಿತ ಆಸ್ತಿ ಸರ್ವೆ ನಂ. 76ರಲ್ಲಿ ಒಟ್ಟು 17 ಎಕರೆ 39 ಗುಂಟೆ ಭೂಮಿ 1954ರಿಂದ 1979ರವರೆಗೆ ಅವರ ಹೆಸರಿನಲ್ಲಿ ದಾಖಲಾಗಿತ್ತು. ಆದರೆ 1979ರ ನಂತರ ಯಾವುದೇ ಕಾನೂನುಬದ್ಧ ಖರೀದಿ ಪ್ರಕ್ರಿಯೆ, ಮ್ಯೂಟೇಷನ್ ಅಥವಾ ವಾರಸುದಾರರ ಅನುಮತಿ ಇಲ್ಲದೆ ಕರಿಯಪ್ಪ ತಂದೆ ಹನುಮಪ್ಪ ಜ್ಯೋತಿ ಎಂಬವರು ಅಕ್ರಮವಾಗಿ ತಮ್ಮ ಹೆಸರಿಗೆ ಭೂಮಿಯನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮೂಲ ಭೂಮಾಲೀಕರ ಅನುಮತಿ ಇಲ್ಲದೆ ಈ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದು ದಲಿತ ರೈತರ ಹಕ್ಕುಗಳ ಮೇಲೆ ನೇರ ದಾಳಿಯಾಗಿದೆ ಎಂದು ಸಂಘಟನೆಯ ಮುಖಂಡರು ದೂರಿದರು.
ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಭೂ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಿ ನೊಂದ ರೈತರಿಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಫೆಬ್ರವರಿ 10ರಂದು ಚಂಡೂರು ಗ್ರಾಮದ ಸರ್ವೆ ನಂ. 76ರ ಭೂಮಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಮೈಲಾಪ್ಪ ಮಾದಿನೂರು, ತಾಲೂಕು ಅಧ್ಯಕ್ಷ ಶ್ರೀಕಾಂತ್ ಹೊಸಮನಿ, ರೈತ ಮುಖಂಡರಾದ ಈರಪ್ಪ ಹಿರೇಮನಿ, ಮಾರುತಿ ದೊಡ್ಡಮನಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.