BIG NEWS : ಹಾಸ್ಟೇಲ್ನಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ಪ್ರಕರಣ : ಅಮಾನತ್ತಿನ ಬಳಿಕ ಶಿಕ್ಷಕರ ಮರುನೇಮಕ..!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ ಫೆ.12 : ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದ ಇಬ್ಬರು ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.
ಮಹೇಶ್ವರ ವಿದ್ಯಾವರ್ಧಕ ಸಮಿತಿ (ರಿ), ಇಟಗಿ ಅವರ ಅಧೀನದಲ್ಲಿ ನಡೆಯುತ್ತಿರುವ ಮಹೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದ ಸಹ ಶಿಕ್ಷಕರಾದ ಪ್ರಭಾಕರ ಮಂಡಲಿಕಪ್ಪ ಭಜಂತ್ರಿ ಹಾಗೂ ಯಂಕಪ್ಪ ರಾಮಪ್ಪ ಅವರನ್ನು ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರು ಅಮಾನತ್ತುಗೊಳಿಸಿದ್ದರು.
ಈ ಕ್ರಮವನ್ನು ಕರ್ನಾಟಕ ಶಿಕ್ಷಣ ಅಧಿನಿಯಮದ ಪ್ರಕಾರ ಅನುಮೋದನೆಗಾಗಿ ಸಂಬಂಧಿತ ಅಧಿಕಾರಿಗಳ ಹಂತಕ್ಕೆ ಸಲ್ಲಿಸಲಾಗಿತ್ತು. ಬಳಿಕ ಅಮಾನತ್ತುಗೊಂಡ ಶಿಕ್ಷಕರ ಮನರಸ್ಥಾಪನೆ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಈ ಪ್ರಕರಣದ ಕುರಿತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿ ಅವರು ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರಿಯಾಗಿರುವುದರಿಂದ ತಮ್ಮ ಹಂತದಲ್ಲಿಯೇ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅನುದಾನಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳ ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1999ರ ನಿಯಮ 2(1)(ಡಿ) ಪ್ರಕಾರ ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಆಡಳಿತಾತ್ಮಕ ಕ್ರಮಗಳ ಬಳಿಕ ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.