SENSATION NEWS : ವಿದೇಶಿ ಪ್ರವಾಸಿಗರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ : ಮೂವರಿಗೆ ಮರಣದಂಡನೆ..!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಗಂಗಾವತಿ, ಫೆ.17 : ಇಸ್ರೇಲಿಯನ್ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಒಬ್ಬ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಮಧ್ಯಾಹ್ನ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಪ್ರಕರಣದಲ್ಲಿನ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ಹೇಳಿ ಶಿಕ್ಷೆ ವಿಧಿಸಿದರು.
ಪ್ರಕರಣದ ವಿವರಗಳ ಪ್ರಕಾರ, ಇಸ್ರೇಲ್ ದೇಶದ ಮಹಿಳೆ ಹಾಗೂ ಸ್ಥಳೀಯ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ, ಅಮೆರಿಕಾದ ಒಬ್ಬ ಪ್ರವಾಸಿಗನ ಕೊಲೆ, ಓಡಿಶಾ ಮತ್ತು ಮಹಾರಾಷ್ಟ್ರ ಮೂಲದ ಪ್ರವಾಸಿಗರನ್ನು ತುಂಗಭದ್ರಾ ಎಡದಂಡ ನಾಲೆಗೆ ತಳ್ಳಿ ಕೊಲೆ ಯತ್ನ ನಡೆಸಿದ ಆರೋಪಗಳು ದಾಖಲಾಗಿದ್ದವು.
ಅತ್ಯಾಚಾರ, ದರೋಡೆ, ಕೊಲೆ, ಸಂಚು, ಹಲ್ಲೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ಒಂದು ಪ್ರಕರಣದಲ್ಲಿ ಮರಣದಂಡನೆ (ಬಿಎನ್ಎಸ್-301) ಹಾಗೂ ಉಳಿದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದವರು ಸಂಗಾಪುರ ಸಾಯಿನಗರದ ಗೌಂಡಿ ಕಾರ್ಮಿಕ ಮಲ್ಲೇಶ ಅಲಿಯಾಸ್ ಹಂದಿ ಮಲ್ಲ, ಅಯ್ಯಪ್ಪ ದಾಸರ, ಮೇಷನ್ ಕೆಲಸಗಾರ ಚೇತನ್ ಸಾಯಿ ಕಾಮೇಶ್ವರರಾವ್ ಮತ್ತು ಶರಣಪ್ಪ ಅಲಿಯಾಸ್ ಶರಣ ಬಸವರಾಜ್ ಎಂದು ನ್ಯಾಯಾಲಯ ತಿಳಿಸಿದೆ.
ಶಿಕ್ಷೆಯ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಆರೋಪಿಗಳಿಗೆ ನ್ಯಾಯಾಲಯ ಅವಕಾಶ ನೀಡಿದೆ.