ಕೊಪ್ಪಳ: ಎರಡೂ ಕಣ್ಣಿಲ್ಲದೇ ಅಂಧಕಾರದಲ್ಲಿದ್ದ ಭಾಗ್ಯನಗರದ ಚಂದ್ರಿಕಾ ಅಂಟಾಳ ಎಂಬುವರನ್ನು ವರಿಸುವ ಮೂಲಕ ಯಲಬುರ್ಗಾದ ಗಣೇಶ ರಾಜೊಳ್ಳಿ ಎಂಬಾತ ಬಾಳಿಗೆ ಬೆಳಕಾಗಿದ್ದಾನೆ.
ಭಾಗ್ಯನಗರದ ವಧು ಚಂದ್ರಿಕಾಗೆ ಹುಟ್ಟಿನಿಂದ ಎರಡೂ ಕಣ್ಣುಗಳಿಲ್ಲ. ಆದರೂ ಪಾಲಕರು ಶಿಕ್ಷಣ ಕೊಡಿಸಿದ್ದಾರೆ. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಬಿಸಿಎಂ ಇಲಾಖೆಯಲ್ಲಿ ಎಸ್ಡಿಎ ನೌಕರಿ ಗಿಟ್ಟಿಸಿಕೊಂಡಿದ್ದಾಳೆ. ಆದರೆ, ನೇತ್ರಗಳಿಲ್ಲದ ಕಾರಣ ಮದುವೆ ಮುಂದಿನ ಜೀವನ ಹೇಗೆಂದು ಪಾಲಕರು ಆತಂಕದಲ್ಲಿದ್ದರು.
ಭಾಗ್ಯನಗರ ಹಾಗೂ ಯಲಬುರ್ಗಾ ಎಸ್ಎಸ್ಕೆ ಸಮುದಾಯದ ಹಿರಿಯರು ಒಡಗೂಡಿ ಯಲಬುರ್ಗಾದ ಗಣೇಶಗೆ ವಧು ತೋರಿಸಿದ್ದಾರೆ. ಯುವತಿಗೆ ಬಾಳು ನೀಡಲು ನಿರ್ಧರಿಸಿದ ಗಣೇಶ ಶುಕ್ರವಾರ ಸಂಪ್ರದಾಯದಂತೆ ಮನೆಯವರು, ಗುರು&ಹಿರಿಯರ ಸಮ್ಮುಖದಲ್ಲಿ ಭಾಗ್ಯನಗರದಲ್ಲಿ ಮದುವೆಯಾಗಿದ್ದಾನೆ. ಯಲಬುರ್ಗಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಪಾಲಕರಿಗೆ ಒಬ್ಬನೇ ಮಗನಾಗಿದ್ದರೂ ಅಂಧ ಯುವತಿ ವರಿಸುವ ಮೂಲಕ ಮಾದರಿಯಾಗಿದ್ದಾನೆ.