LOCAL NEWS : ಕುಕನೂರು | ಮಹಿಳೆಯರಿಗೆ ಸಮಾನ ಅವಕಾಶ & ಗೌರವ ನೀಡಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ : ಮಮತಾ ರಾಯರೆಡ್ಡಿ

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಸಂಭ್ರಮದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಸಾಧಕಿಯರಿಗೆ ಸನ್ಮಾನ!
ಕುಕನೂರು ಮಾರ್ಚ್ 14 : “ಮಹಿಳೆ ಕೇವಲ ಒಂದು ಕುಟುಂಬದ ಶಕ್ತಿಯಲ್ಲ, ಅವಳು ಇಡೀ ರಾಷ್ಟ್ರದ ಚೈತನ್ಯ. ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ನೀಡಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ,” ಎಂದು ಆರಾಮ್ ಸಂಸ್ಥೆಯ ಅಧ್ಯಕ್ಷೆ ಮಮತಾ ರಾಯರೆಡ್ಡಿ ಅಭಿಪ್ರಾಯಪಟ್ಟರು.
ಇಂದು ಪಟ್ಟಣದಲ್ಲಿ ಕೊಪ್ಪಳ ಜಿಲ್ಲಾಹಾಗೂ ಯಲಬುರ್ಗಾವಿಧಾನಸಭಾ ಮಹಿಳಾ ಕಾಂಗ್ರೆಸ್ ಹಾಗೂ ಆರಾಮ್(ಎನ್.ಜಿ.ಓ) ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ‘ಮಹಿಳೆಗೆ ಕೇವಲ ಒಂದು ದಿನದ ಮಟ್ಟಿಗೆ ಗೌರವ ನೀಡಿದರೆ ಸಾಲದು. ಆಕೆಯ ತ್ಯಾಗವನ್ನು ಪ್ರತಿದಿನವೂ ಸ್ಮರಿಸೋಣ ಮತ್ತು ಆಕೆಗೆ ಬೇಕಾದ ಸಮಾನ ಅವಕಾಶ ಹಾಗೂ ಸುರಕ್ಷತೆಯನ್ನು ಒದಗಿಸೋಣ. ಅಂದೇ ಈ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ.
“ಒಬ್ಬ ಮಹಿಳೆ ತನ್ನ ಇಡೀ ಜೀವನವನ್ನು ಕುಟುಂಬಕ್ಕಾಗಿ ಮುಡಿಪಾಗಿಡುತ್ತಾಳೆ. ತನ್ನ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಇತರರ ಸುಖದಲ್ಲಿ ಸಂತೋಷ ಕಾಣುವ ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಅವಳು ನೀಡುವ ಕೊಡುಗೆ ಅನನ್ಯ., ಅವಳು ತ್ಯಾಗದ ಸಂಕೇತ, ಸಮಾಜದಲ್ಲಿ ಎಷ್ಟೇ ಸವಾಲುಗಳು ಎದುರಾದರೂ, ನೋವುಗಳನ್ನು ನಗುಮುಖದಿಂದಲೇ ನುಂಗಿ ಜವಾಬ್ದಾರಿಗಳನ್ನು ನಿಭಾಯಿಸುವ ಆಕೆಯ ತಾಳ್ಮೆಯೇ ಆಕೆಯ ಅತಿದೊಡ್ಡ ಶಕ್ತಿ. ತಾಳ್ಮೆಯೆಂದರೆ ಸೋಲಲ್ಲ, ಅದು ಪರಿಸ್ಥಿತಿಯನ್ನು ಗೆಲ್ಲುವ ದಾರಿ ಎಂದು ಮಹಿಳೆ ಸಾಬೀತುಪಡಿಸಿದ್ದಾಳೆ ಎಂದು ಹೇಳಿದರು.

ಮಹಿಳಾ ಸಾಧಕಿಯರಿಗೆ “2026ನೇ ಸಾಲಿನ ಕೊಪ್ಪಳ ಜಿಲ್ಲಾ ಸ್ತ್ರೀ ರತ್ನ ಪ್ರಶಸ್ತಿ ಪ್ರಧಾನ” : ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಕೃಷಿ, ಸಮಾಜ ಸೇವೆ, ಮತ್ತು ಕ್ರೀಡೆ ಇನ್ನು ಇತರೆ) ಗಣನೀಯ ಸಾಧನೆ ಮಾಡಿದ 14 ಜನ ಸಾಧಕ ಮಹಿಳೆಯರನ್ನು ಫಲಾಪೇಕ್ಷೆಯಿಲ್ಲದೇ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶರಣಮ್ಮ ಚಟ್ಟಿ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದು ಸಂತಸದ ವಿಷಯ. ಆದರೆ, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಇಂದಿಗೂ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ” ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ‘ಮಹಿಳಾ ಸಬಲೀಕರಣ ಮತ್ತು ಇಂದಿನ ಸವಾಲುಗಳು’ ಎಂಬ ವಿಷಯಗಳನ್ನಾಧರಿಸಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮಹಿಳೆಯರ ಕಾನೂನು ಹಕ್ಕುಗಳು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು.
ಸಾಂಸ್ಕೃತಿಕ ವೈಭವ : ಭರತನಾಟ್ಯ, ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ ಕುಷ್ಟಗಿ ಮಹಿಳಾ ಡೊಳ್ಳು ಕುಣಿತ ಮಹಿಳಾ ಮಲ್ಲಗಂಬ, ಸಮರಕಲೆ ಕಿನ್ನಾಳ ಕಲೆಯ ವಸ್ತು ಪ್ರದರ್ಶನ, ಮಹಿಳಾ ಸಂಘಟನೆಯ ಸದಸ್ಯರಿಂದ ಜಾನಪದ ಗೀತೆ ಮತ್ತು ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು. ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
