LOCAL NEWS : ಇಂದು ನವಲಿ ಗ್ರಾಮದ ಶ್ರೀ ಭೂಗಾಪುರೇಶ್ವರ ಮಹಾರಥೋತ್ಸವ : ಭಕ್ತ ಸಾಗರ ನಿರೀಕ್ಷೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ನವಲಿ (ಕನಕಗಿರಿ) ಮಾ. 25 : ತಾಲೂಕಿನ ಸುಕ್ಷೇತ್ರ ನವಲಿ ಗ್ರಾಮದ ಆರಾಧ್ಯ ದೈವ ಶ್ರೀ ಭೂಗಾಪುರೇಶ್ವರ (ಆಂಜನೇಯಸ್ವಾಮಿ) ಮಹಾರಥೋತ್ಸವವು ಇಂದು (ಬುಧವಾರ) ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ.
ಗ್ರಾಮದ ಇತಿಹಾಸ ಪ್ರಸಿದ್ಧ ಭೂಗಾಪುರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ಇಂದು ಸಂಜೆ 5:45ಗಂಟೆಗೆ ಶುಭ ಲಗ್ನದಲ್ಲಿ ರಥಾರೋಹಣ ನಡೆಯಲಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇಂದು ಬೆಳಿಗ್ಗೆಯಿಂದಲೇ ಶ್ರೀ ಭೂಗಾಪುರೇಶ್ವರ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ, ಆಭರಣಗಳ ಅಲಂಕಾರ ಹಾಗೂ ಮಹಾಮಂಗಳಾರತಿ ಸೇವೆಗಳು ನೆರವೇರಲಿವೆ. ರಥೋತ್ಸವದ ಪ್ರಯುಕ್ತ ನವಲಿ ಗ್ರಾಮದ ಮನೆಮನಗಳಲ್ಲಿ ಹಬ್ಬದ ಕಳೆ ಮನೆಮಾಡಿದ್ದು, ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ, ಮಾವಿನ ಎಲೆಗಳ ತೋರಣಗಳಿಂದ ಶೃಂಗರಿಸಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಕನಕಗಿರಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸಂಜೆ ರಥ ಎಳೆಯುವ ಸಂದರ್ಭದಲ್ಲಿ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.
ಈ ವೈಭವದ ರಥೋತ್ಸವಕ್ಕೆ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ.
“ಈ ಭಾಗದ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಪ್ರಸಿದ್ಧಿ ಹೊಂದಿರುವಂತ ಈ ದೇವಸ್ಥಾನವು, ನಂಬಿದ ಭಕ್ತರ ಕಷ್ಟ ಪರಿಹರಿಸುವ ಹಾಗೂ ಇಷ್ಟಾರ್ಥಗಳನ್ನು ನೀಡುವ ಶಕ್ತಿ ಹೊಂದಿದೆ”
:- ವಿಷ್ಣುನಾಯ್ಕ್, ನವಲಿ ತಾಂಡಾ ಗ್ರಾಮಸ್ಥ