Post Views: 31
LOCAL NEWS : ಅಂಬೇಡ್ಕರ್ ತತ್ವಗಳು ಯುವಕರಿಗೆ ದಾರಿದೀಪ: ಯಮನೂರಪ್ಪ ಕಟ್ಟಿಮನಿ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ, ಏಪ್ರಿಲ್ 15 : ತಾಲ್ಲೂಕಿನ ಬಳಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಹಳ್ಳಿ ತಾಂಡಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಯುವಜನರ ತಂಡ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಿತು.

ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಆರಂಭಿಸಲಾಯಿತು. ಬಳಿಕ ಅಂಬೇಡ್ಕರ್ ಕುರಿತು ಪೀಠಿಕೆ ವಾಚನ ನಡೆಯಿತು. ಅವರ ಶಿಕ್ಷಣ, ಜೀವನ ತತ್ವ ಹಾಗೂ ಸಿದ್ಧಾಂತಗಳ ಕುರಿತು ವಿಚಾರ ಸಂಕಿರಣವೂ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ. ಪಂ. ಮಾಜಿ ಸದಸ್ಯ ಯಮನೂರಪ್ಪ ಕಟ್ಟಿಮನಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಒಂದು ಚಿಂತನೆ, ಒಂದು ಚಳವಳಿ ಹಾಗೂ ಶೋಷಿತರ ಧ್ವನಿಯಾಗಿ ಸದಾ ಜೀವಂತವಾಗಿರುವ ಮಹಾನ್ ದಾರ್ಶನಿಕ ಎಂದು ಕೊಂಡಾಡಿದರು. ಅವರ ತತ್ವಗಳು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿದ್ದು, ಶಿಕ್ಷಣ ಮತ್ತು ಹಕ್ಕುಗಳ ಅರಿವು ಮೂಲಕ ಸಮಾಜವನ್ನು ಸಮತೋಲನದ ದಾರಿಯಲ್ಲಿ ಮುನ್ನಡೆಸಬೇಕೆಂದು ಕರೆ ನೀಡಿದರು.
ಸಂವಿಧಾನವನ್ನು ಓದಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಂಬೇಡ್ಕರ್ ಅವರ ಆದರ್ಶಗಳನ್ನು ಅರಿತುಕೊಂಡು ಯುವಕರು ತಮ್ಮ ಬದುಕಿನಲ್ಲಿ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಕುಮಾರ ಬಳಗೇರಿ, ವಿರೂಪಾಕ್ಷಯ್ಯ ಕುರ್ತಕೋಟಿ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಭಾನಾಪುರ, ಶ್ರೀಕಾಂತ ಕಟ್ಟಿಮನಿ, ಪ್ರಕಾಶ್ ಬಳಿಗೇರಿ, ಯಲ್ಲಪ್ಪ ಕಾರಭಾರಿ, ಅಂಬರೀಶ ಮನ್ನಾಪುರ, ಮನೋಹರ್, ವೆಂಕಟೇಶ್ ನಾಯ್ಕ, ಶಶಿಕುಮಾರ್, ರಾಘವೇಂದ್ರ, ಶಶಿ ಕೆ., ಮೇಘರಾಜ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.