Post Views: 93
BREAKING : ಪ್ರೇಮಪಾಶಕ್ಕೆ ಸಿಲುಕಿದ ಪಿಎಸ್ಐ!: ಲೇಡಿ ಕಾನ್ಸ್ಟೇಬಲ್ ವಿರುದ್ಧ ಪಿಎಸ್ಐ SPಗೆ ದೂರು..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಯಾದಗಿರಿ, ಮೇ 06 : ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಲಿವಿಂಗ್ ಟುಗೆದರ್ನಲ್ಲಿ ಇದ್ದ ಜೋಡಿಯ ಮಧ್ಯೆ ಉಂಟಾದ ವಿವಾದ ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಲೇಡಿ ಕಾನ್ಸ್ಟೇಬಲ್ ಒಬ್ಬರು ತಮಗೆ ಕೈಕೊಟ್ಟು ಮತ್ತೊಬ್ಬ ಯುವಕನೊಂದಿಗೆ ಮದುವೆಯಾಗಲು ಸಜ್ಜಾಗಿರುವುದಾಗಿ ಆರೋಪಿಸಿ ಪಿಎಸ್ಐ ಒಬ್ಬರು ರಾಯಚೂರು ಎಸ್ಪಿಗೆ ದೂರು ನೀಡಿದ್ದಾರೆ.
ಶಹಾಪುರದಲ್ಲಿ ಗುಪ್ತಚರ ವಿಭಾಗದಲ್ಲಿ ಪಿಎಸ್ಐ ಆಗಿರುವ ವಿರೇಶ್ ಅವರು, ವಿಜಯಶ್ರೀ ಎಂಬ ಕಾನ್ಸ್ಟೇಬಲ್ ಜೊತೆ 2017ರಿಂದ ಪರಿಚಯ ಹೊಂದಿ ಬಳಿಕ ಪ್ರೀತಿಯಲ್ಲಿ ತೊಡಗಿದ್ದೇವೆ ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಆರಂಭವಾದ ಸ್ನೇಹ ನಂತರ ಪ್ರೀತಿಗೆ ತಿರುಗಿದ್ದು, ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ ನಂತರವೂ ಸಂಬಂಧ ಮುಂದುವರಿದಿತ್ತೆಂದರು.

ರಾಯಚೂರು ಗ್ರಾಮೀಣ ಠಾಣೆಯಲ್ಲಿ ಸೇವೆ ಸಲ್ಲಿಸುವ ವೇಳೆ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಿದ್ದು, ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯೂ ಆಗಿದ್ದೇವೆ ಎಂದು ಅವರು ಆರೋಪಿಸಿದ್ದಾರೆ.
“ವಿಜಯಶ್ರೀ ನನ್ನಿಂದ ಸುಮಾರು ₹35 ಲಕ್ಷ ಪಡೆದಿದ್ದಾಳೆ. ಎರಡು ಬಾರಿ ಗರ್ಭಿಣಿಯಾಗಿದ್ದಾಗ ನನಗೆ ತಿಳಿಯದಂತೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಇದೀಗ ರಿಜಿಸ್ಟರ್ ಮದುವೆ ಮಾಡಿಕೊಳ್ಳೋಣ ಎಂದಾಗ ಜಾತಿ ನೆಪ ಹೇಳಿ ಬೇರೆ ಯುವಕನೊಂದಿಗೆ ಮದುವೆಯಾಗಲು ಮುಂದಾಗಿದ್ದಾಳೆ” ಎಂದು ವಿರೇಶ್ ಆರೋಪಿಸಿದ್ದಾರೆ.
ವಿಜಯಶ್ರೀ ಅವರ ಮದುವೆ ಮೇ 7ರಂದು ರಾಯಚೂರಿನಲ್ಲಿ ನಿಗದಿಯಾಗಿರುವುದಾಗಿ ತಿಳಿದು ಬಂದಿದೆ. ಈ ಮದುವೆ ತಡೆಯಬೇಕು ಹಾಗೂ ತನಗೆ ನ್ಯಾಯ ಒದಗಿಸಬೇಕು ಎಂದು ವಿರೇಶ್ ಆನ್ಲೈನ್ ಮೂಲಕ ದೂರು ನೀಡಿದ್ದಾರೆ.
ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಪೊಲೀಸ್ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿದ್ದು, ಇಲಾಖೆಗೆ ಮುಜುಗರ ತಂದಿದೆ. ಈ ಕುರಿತು ಕಾನ್ಸ್ಟೇಬಲ್ ವಿಜಯಶ್ರೀ ಅಥವಾ ಪೊಲೀಸ್ ಇಲಾಖೆಯ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.