BIG NEWS : ಕೇಂದ್ರ ಸರ್ಕಾರದ ವೈಫಲ್ಯಗಳೇ ಜನರ ಮೇಲೆ ‘ತ್ಯಾಗ’ದ ರೂಪದಲ್ಲಿ ಹೇರಿಕೆ, : ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ : ರಾಗಾ ಹೇಳಿದ ಮಾತು ನಿಜವಾಯಿತಾ?

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ನವದೆಹಲಿ, ಮೇ 12 : ಕೇಂದ್ರದ ಬಿಜೆಪಿ ಸರ್ಕಾರವು ಕಳೆದ 12 ವರ್ಷಗಳ ಆಡಳಿತದಲ್ಲಿ ದೇಶದ ಆರ್ಥಿಕತೆಯನ್ನು ಅತ್ಯಂತ ಕಠಿಣ ಸ್ಥಿತಿಗೆ ತಂದಿದೆ. ತನ್ನ ಆಡಳಿತಾತ್ಮಕ ಸೋಲುಗಳನ್ನು ಮುಚ್ಚಿಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಅಸಮಂಜಸವಾದ ‘ತ್ಯಾಗ’ಕ್ಕೆ ಕರೆ ನೀಡುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ “ಎಕ್ಸ್-X” ಖಾತೆಯ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಅವರು, “ಪ್ರಧಾನಿಯವರ ಇತ್ತೀಚಿನ ಸಲಹೆಗಳು ಕೇವಲ ಉಪದೇಶಗಳಲ್ಲ, ಬದಲಾಗಿ ಅವು ಈ ಸರ್ಕಾರದ ವೈಫಲ್ಯದ ಸಾಕ್ಷಿಗಳಾಗಿವೆ,” ಎಂದು ಬಣ್ಣಿಸಿದ್ದಾರೆ.

ಕಳೆದ ಮಾರ್ಚ್ ನಲ್ಲಿ 09 & 12 ರಂದು ದೇಶದ ಆರ್ಥಿಕ ಸಂಕಷ್ಟದ ಕುರಿತು ರಾಹುಲ್ ಗಾಂಧಿ ಅವರ ಎಚ್ಚರಿಕೆ ಮಾತುಗಳನ್ನು ಆಡಿದ್ದು, ”ದೇಶಕ್ಕೆ ಮತ್ತು ನಮ್ಮ ಆರ್ಥಿಕತೆಗೆ ಅತಿದೊಡ್ಡ ಪೆಟ್ಟು ಬೀಳಲಿದೆ. ಸ್ಟಾಕ್ ಮಾರ್ಕೆಟ್ನ ಪರಿಸ್ಥಿತಿಯನ್ನು ನೀವು ಈಗಾಗಲೇ ನೋಡಿದ್ದೀರಿ. ಶೀಘ್ರದಲ್ಲೇ ದೇಶವು ಅನಿಲ (Gas), ಪೆಟ್ರೋಲ್ ಮತ್ತು ಎಲ್ಲಾ ರೀತಿಯ ಇಂಧನಗಳ ಸಮಸ್ಯೆಯನ್ನು ಎದುರಿಸಲಿದೆ. ಏಕೆಂದರೆ ನಮ್ಮ ದೇಶದ ಇಂಧನ ಭದ್ರತೆಯು (Energy Security) ರಾಜಿ ಮಾಡಿಕೊಳ್ಳಲ್ಪಟ್ಟಿದೆ.
