FLASH NEWS : ಪುರಾತತ್ವ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿ ಮಹಿಳೆ ಆಕ್ರೋಶ!
PV ನ್ಯೂಸ್ ಡಿಜಿಟಲ್ :
ಬಾಗಲಕೋಟೆ, ಮೇ 19 : ಜಿಲ್ಲೆಯ ಬಾದಾಮಿ ಪಟ್ಟಣದ ಚಾಲುಕ್ಯರ ಕಾಲದ ಐತಿಹಾಸಿಕ ದೇಗುಲದಲ್ಲಿ ಪಾದರಕ್ಷೆ ಧರಿಸಿ ಪ್ರವೇಶಿಸಿದ್ದ ವಿಚಾರಕ್ಕೆ ಸಂಬಂಧಿಸಿ ಪುರಾತತ್ವ ಇಲಾಖೆ ಸಿಬ್ಬಂದಿ ಮತ್ತು ಪ್ರವಾಸಿ ಮಹಿಳೆಯ ನಡುವೆ ವಾಗ್ವಾದ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾದಾಮಿಯ ಮೇಣಬಸದಿ ಪ್ರದೇಶದಲ್ಲಿರುವ ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡಿದ್ದ ಪ್ರವಾಸಿ ಮಹಿಳೆ, ಪುರಾತತ್ವ ಇಲಾಖೆಯ ಸಿಬ್ಬಂದಿಯಾಗಿರುವ ರೋಷಿನಿ ಮುಸ್ತಾಫಿ ಅವರು ಚಪ್ಪಲಿ ಧರಿಸಿಕೊಂಡೇ ದೇಗುಲದ ಒಳಭಾಗಕ್ಕೆ ತೆರಳಿರುವುದನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಇಬ್ಬರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸ್ಥಳದಲ್ಲಿದ್ದವರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
“ಚಪ್ಪಲಿ ಹಾಕಿಕೊಂಡು ಯಾಕೆ ದೇಗುಲದ ಒಳಗೆ ಹೋಗಿದ್ದೀರಿ? ಕರ್ತವ್ಯದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯೂ ಇರಬೇಕು” ಎಂದು ಪ್ರವಾಸಿ ಮಹಿಳೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವುದು ವೈರಲ್ ವಿಡಿಯೋದಲ್ಲಿ ಕೇಳಿಬಂದಿದೆ.
ಘಟನೆ ನಡೆದ ಸ್ಥಳವು ಚಾಲುಕ್ಯರ ಕಾಲದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪ್ರವಾಸಿ ತಾಣವಾಗಿದ್ದು, ದೇಗುಲ ಪರಿಸರದಲ್ಲಿ ಪಾಲಿಸಬೇಕಾದ ಆಚರಣೆ, ಸಂಸ್ಕೃತಿ ಮತ್ತು ನಿಯಮಗಳ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಐತಿಹಾಸಿಕ ಸ್ಮಾರಕಗಳಲ್ಲಿ ಸಿಬ್ಬಂದಿ ಹಾಗೂ ಪ್ರವಾಸಿಗರು ಪಾಲಿಸಬೇಕಾದ ಶಿಸ್ತು ಮತ್ತು ಸಂವೇದನೆ ಬಗ್ಗೆ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.