BIG NEWS : ಗೃಹಲಕ್ಷ್ಮಿ ಯೋಜನೆ”ಯ ಎರಡು ತಿಂಗಳ ಹಣ ಬಾಕಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ!

PV ನ್ಯೂಸ್ ಡಿಜಿಟಲ್ :
ಬೆಂಗಳೂರು, ಮೇ 21 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಗೃಹಲಕ್ಷ್ಮಿ ಯೋಜನೆ”ಯ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ರಾಜಧಾನಿ ನಗರದ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್ನ ಪವಿತ್ರಾ ಎಂಬುವರು ಹೈಕೋರ್ಟ್ಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿನ ಪ್ರಮುಖ ಅಂಶಗಳು :-
2 ತಿಂಗಳ ಹಣ ಬಾಕಿ :- ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ಸಿಗಬೇಕಾದ ಕಳೆದ ಎರಡು ತಿಂಗಳ ಮಾಸಿಕ ಧನಸಹಾಯ ಇನ್ನೂ ಪಾವತಿಯಾಗಿಲ್ಲ. ಬಡ ಕುಟುಂಬಗಳಿಗೆ ಆಸರೆ: ಯೋಜನೆಯ ಹಣವನ್ನೇ ನಂಬಿಕೊಂಡಿರುವ ಲಕ್ಷಾಂತರ ಬಡ ಕುಟುಂಬಗಳು ಮತ್ತು ಮಹಿಳೆಯರು ಈ ವಿಳಂಬದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಬಾಕಿ ಇರುವ ಹಣವನ್ನು ತಕ್ಷಣವೇ ಪಾವತಿಸಲು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿವರಣೆ ಕೋರಿ ತುರ್ತು ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ಬಾಕಿ ಹಣ ಬಿಡುಗಡೆ ವಿಳಂಬಕ್ಕೆ ಕಾರಣವೇನು? ಮತ್ತು ಯಾವಾಗ ಹಣ ಪಾವತಿಸಲಾಗುವುದು? ಎಂಬ ಬಗ್ಗೆ ಉತ್ತರಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದ್ದು, ಹೈಕೋರ್ಟ್ನ ಈ ಕ್ರಮದಿಂದಾಗಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ನಿರೀಕ್ಷೆಯಲ್ಲಿದ್ದ ರಾಜ್ಯದ ಲಕ್ಷಾಂತರ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿದೆ.