LOCAL NEWS :ಯಲಬುರ್ಗಾ: ಭಾರೀ ಗಾಳಿಗೆ ನೆಲಕ್ಕುರುಳಿದ 400 ಕೆ.ವಿ ವಿದ್ಯುತ್ ಕಂಬ; ತಪ್ಪಿದ ದೊಡ್ಡ ದುರಂತ!
PV ನ್ಯೂಸ್ ಡಿಜಿಟಲ್ :
ಯಲಬುರ್ಗಾ, ಮೇ 26 : ತಾಲೂಕಿನ ಸಂಗನಾಳ-ಹಾಳಕೇರಿ ರಸ್ತೆ ಮಧ್ಯೆ ಹಾದು ಹೋಗಿರುವ 400 ಕೆ.ವಿ ವಿದ್ಯುತ್ ಕಂಬ ಹಾಗೂ ಉನ್ನತ ಮಟ್ಟದ ತಂತಿ ಲೈನ್ ಶನಿವಾರ (ಮೇ.23) ಮಧ್ಯರಾತ್ರಿ ಭಾರೀ ಗಾಳಿಗೆ ನೆಲಕ್ಕುರುಳಿದ ಘಟನೆ ಗ್ರಾಮೀಣ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ರಸ್ತೆ ಮಧ್ಯೆ ಬೃಹತ್ ಗಾತ್ರದ ಕಂಬ ಉರುಳಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ವಾಹನ ಸವಾರರು ಭಯಭೀತರಾದರು. ಅದೃಷ್ಟವಶಾತ್ ಘಟನೆ ಮಧ್ಯರಾತ್ರಿ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸದೇ ದೊಡ್ಡ ದುರಂತ ಒಂದು ತಪ್ಪಿದಂತಾಗಿದೆ ಎಂದು ಹೇಳಬಹುದು.

“ಇದು ಸಹಜ ಘಟನೆ ಅಲ್ಲ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯ ಪರಿಣಾಮ” ಎಂದು ಆ ಗ್ರಾಮದ ಸುತ್ತಮುತ್ತಲಿನ ರೈತರು ಕಿಡಿಕಾರಿದ್ದಾರೆ. ಈ ರಸ್ತೆ ಮಾರ್ಗವನ್ನು ಪ್ರತಿದಿನ ನೂರಾರು ರೈತರು ಜಮೀನುಗಳಿಗೆ ತೆರಳಲು ಬಳಸುತ್ತಾರೆ. ಟ್ರ್ಯಾಕ್ಟರ್, ಎತ್ತುಬಂಡಿ, ಬೆಳೆ ಸಾಗಣೆ ವಾಹನಗಳು ಹಾಗೂ ಕೃಷಿ ಯಂತ್ರೋಪಕರಣಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. “ಹಗಲು ವೇಳೆ ಈ ಕಂಬ ಉರುಳಿ ಬಿದ್ದಿದ್ದರೆ ರೈತರು, ಕೂಲಿ ಕಾರ್ಮಿಕರು ಅಥವಾ ಶಾಲಾ ಮಕ್ಕಳು ಬಲಿಯಾಗುತ್ತಿದ್ದರು. ಆಗ ಅದರ ಹೊಣೆ ಯಾರು ಹೊರುತ್ತಿದ್ದರು?” ಎಂದು ಗ್ರಾಮಸ್ಥರು ಆಕ್ರೋಶ ಹೋರಹಾಕಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಿಸಿದರು. ಬಳಿಕ ವಿದ್ಯುತ್ ಇಲಾಖೆ ಸಿಬ್ಬಂದಿ ಹಾಗೂ ತಾಂತ್ರಿಕ ತಂಡ ದುರಸ್ತಿ ಕಾರ್ಯ ಆರಂಭಿಸಿತು. ಆದರೆ, ಕೇವಲ ದುರಸ್ತಿ ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ , “ಕಳಪೆ ಕಾಮಗಾರಿ ನಡೆಸಿದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಅನಾಹುತ ಸಂಭವಿಸುವುದು ಖಚಿತ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ತಾಲೂಕಿನಲ್ಲಿನ ಎಲ್ಲಾ ಉನ್ನತ ವಿದ್ಯುತ್ ಕಂಬಗಳು ಹಾಗೂ ವಿಂಡ್ಮಿಲ್ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು. ಗ್ರಾಮೀಣ ಭಾಗದ ಜನರ ಜೀವದ ಜೊತೆ ಆಟವಾಡುವ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
news sources : DD News Local.