BIG NEWS : ವನ್ಯಜೀವಿ ಬೇಟೆ ತಡೆಗೆ ಹೋದ ಆರ್ಎಫ್ಒ ಸೇರಿ ಸಿಬ್ಬಂದಿಗೆ ಹಲ್ಲೆ!!
AI photo
PV NEWS :
ಯಾದಗಿರಿ, ಜೂನ್ 5: ವನ್ಯಜೀವಿಗಳ ಬೇಟೆ ತಡೆಯಲು ತೆರಳಿದ್ದ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಸೇರಿದಂತೆ ಮೂವರು ಅರಣ್ಯ ಸಿಬ್ಬಂದಿಯನ್ನು ಬೇಟೆಗಾರರ ತಂಡ ಜಾಲಿ ಗಿಡಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸುರಪುರ ವಲಯ ಅರಣ್ಯಾಧಿಕಾರಿ ಬಾಗಪ್ಪಗೌಡ ಸುಂಬಡ, ಗಸ್ತು ವನಪಾಲಕರಾದ ಕಾಶೀನಾಥ್ ರಾಠೋಡ್ ಹಾಗೂ ಲಾಲ್ ಮಹ್ಮದ್ ಹಲ್ಲೆಗೊಳಗಾದವರು. ಮೇ 2ರಂದು ನಸುಕಿನ ಜಾವ ವನ್ಯಜೀವಿಗಳ ಬೇಟೆಗೆ ಸಂಬಂಧಿಸಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೊವೊಂದರಲ್ಲಿ ಮೊಲ, ನರಿ, ಮುಳ್ಳುಹಂದಿ, ಕೃಷ್ಣಮೃಗ ಹಾಗೂ ಕಾಡುಹಂದಿಗಳ ಬೇಟೆಯ ದೃಶ್ಯಗಳು ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಕಾರ್ಯಾಚರಣೆ ವೇಳೆ ಕಕ್ಕೇರಾ ಗ್ರಾಮದ ರಾಮಲಕೋಜರ ದೊಡ್ಡಿ ನಿವಾಸಿಗಳಾದ ಐವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಮತ್ತೊಂದು ಬೊಲೆರೊ ವಾಹನದಲ್ಲಿ ತೆರಳುತ್ತಿದ್ದ ಅರಣ್ಯ ಅಧಿಕಾರಿಗಳ ವಾಹನವನ್ನು ಅಡ್ಡಗಟ್ಟಿದ ಬೇಟೆಗಾರರ ತಂಡ, ಆರ್ಎಫ್ಒ ಬಾಗಪ್ಪಗೌಡ ಅವರನ್ನು ಎಳೆದುಕೊಂಡು ಹೋಗಿ ಜಾಲಿ ಗಿಡಕ್ಕೆ ಕಟ್ಟಿ ಬಡಿಗೆಯಿಂದ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅವರನ್ನು ರಕ್ಷಿಸಲು ಮುಂದಾದ ಗಸ್ತು ವನಪಾಲಕರಾದ ಲಾಲ್ ಮಹ್ಮದ್ ಹಾಗೂ ಕಾಶೀನಾಥ್ ರಾಠೋಡ್ ಮೇಲೆಯೂ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆಗಾರರು ಅರಣ್ಯ ಸಿಬ್ಬಂದಿಯ ಸಮವಸ್ತ್ರ ಹರಿದು, ಅಧಿಕಾರಿಗಳ ಹುದ್ದೆಯ ಗುರುತುಗಳನ್ನು ಕಿತ್ತೆಸೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.