LOCAL NEWS :”ಕಕ್ಕಿಹಳ್ಳಿಯಲ್ಲಿ ಜೂನ್ 21ರಂದು : ಸಾಂವಿಧಾನಿಕ ಮೌಲ್ಯಗಳು, ಭ್ರಾತೃತ್ವ ಕುರಿತು ಯುವಜನ ಶಿಬಿರ”

PV NEWS :
ಕುಕನೂರ, ಜೂ. 17 : ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಭಾರತದ ಸಂವಿಧಾನದ ಆಶಯಗಳು, ಸಾಂವಿಧಾನಿಕ ಮೌಲ್ಯಗಳು, ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ “ಸಾಂವಿಧಾನಿಕ ಮೌಲ್ಯಗಳ ಅನುಷ್ಠಾನ ಮತ್ತು ಭ್ರಾತೃತ್ವ ಕುರಿತು ಯುವಕ-ಯುವತಿಯರಿಗಾಗಿ ಯುವಜನ ಶಿಬಿರ” ವನ್ನು ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆಯ ಸಂಚಾಲಕ ಭೀಮಾಶಂಕರ ಪಾಣೇಗಾಂವ ಅವರು ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಡಿವೈಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ) ಆಶ್ರಯದಲ್ಲಿ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ, ಬಳಗೇರಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಶಿಬಿರ ನಡೆಯಲಿದ್ದು, ಯುವಜನರಲ್ಲಿ ಸಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಚಿಂತನೆ, ಭ್ರಾತೃತ್ವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವಿವಿಧ ಉಪನ್ಯಾಸಗಳು, ಸಂವಾದಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಿರುಪತಿ ತಲ್ಲೂರ ಅವರು ಸ್ವಾಗತ ಭಾಷಣ ಮಾಡಲಿದ್ದು, ಬಳಗೇರಿ ಗ್ರಾಮ ಆಡಳಿತ ಅಧಿಕಾರಿ ರಾಣಿ ಹಳ್ಳಿ ಅವರು ನಿರೂಪಣೆ ಮಾಡಲಿದ್ದಾರೆ. ಭೀಮಾಶಂಕರ ಪಾಣೇಗಾಂವ ಅವರು ಪ್ರಾಸ್ತಾವಿಕ ನುಡಿ ಆಡಲಿದ್ದು, ಪತ್ರಕರ್ತ ಚಂದ್ರು ಆರ್. ಭಾನಾಪುರ ಅವರು ಭಾರತದ ಸಂವಿಧಾನದ ಪೀಠಿಕೆಯ ಸಾಮೂಹಿಕ ವಾಚನಕ್ಕೆ ನೇತೃತ್ವ ವಹಿಸಲಿದ್ದಾರೆ.
ಜಾನಪದ ಗಾಯಕಿ ಗೌರಿ ಗೋನಾಳ ಹಾಗೂ ಕೊಪ್ಪಳ ತಂಡದಿಂದ ಸಂವಿಧಾನ ಜಾಗೃತಿ ಗೀತೆಗಳ ಗಾಯನ ನಡೆಯಲಿದೆ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನ್ ಸಾಬ್ ವಾಲಿಕಾರ (ಬಿನ್ನಾಳ) ಅವರು ಭ್ರಾತೃತ್ವ ಕುರಿತು ಸಂವಾದ ಹಾಗೂ ಗುಂಪು ಚಟುವಟಿಕೆಗಳನ್ನು ನಡೆಸಿಕೊಡಲಿದ್ದಾರೆ.
